ಡೈಲಿ ವಾರ್ತೆ: 17 ಮೇ 2023

ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಅಧ್ಯಕ್ಷ ಡಾ. ರಾಮಕೃಷ್ಣ ಕುಲಾಲ್ ಕಾಳಾವರ ಕ್ಷೇತ್ರ ಭೇಟಿ

ಕುಂದಾಪುರ : ಪ್ರಸಿದ್ಧ ಪುಣ್ಯ ಕ್ಷೇತ್ರ ಘಾಟಿ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಅಧ್ಯಕ್ಷರಾದ ಡಾ. ರಾಮಕೃಷ್ಣ ಕುಲಾಲ್ ಅವರು ಕರಾವಳಿಯ ಖ್ಯಾತ ಸುಬ್ರಹ್ಮಣ್ಯ ಕ್ಷೇತ್ರವಾದ ಕೋಟೇಶ್ವರ ಸಮೀಪದ ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ದೇವರ ದರ್ಶನ ಪಡೆದರು.

ಕಾಳಾವರ ದೇವಾಲಯದಲ್ಲಿ ನಡೆಯುತ್ತಿರುವ ಜೀರ್ಣೋದ್ದಾರ ಕಾಮಗಾರಿಗಳನ್ನು ವೀಕ್ಷಿಸಿದ ಅವರು ದೇವಾಲಯ ಸಮಿತಿ ಅಧ್ಯಕ್ಷ ಚಂದ್ರಶೇಖರ ಹೆಗ್ಡೆಯವರಿಂದ ಮಾಹಿತಿಗಳನ್ನು ಪಡೆದುಕೊಂಡರು. ಶ್ರೀ ಕಾಳಿಂಗ ದೇವಾಲಯದ ಗರ್ಭ ಗುಡಿಯನ್ನು ಸಂಪೂರ್ಣವಾಗಿ ಮುರ ಕಲ್ಲಿನಿಂದ (ಲ್ಯಾಟರೈಟ್ ಸ್ಟೋನ್ ) ನಿರ್ಮಿಸಿದ ಬಗ್ಗೆ ಹೆಗ್ಡೆ ವಿವರಿಸಿದರು. ಸುತ್ತು ಪೌಳಿಗಳ ಶಿಲಾ ಕೆತ್ತನೆ ಕಾರ್ಯಗಳನ್ನು ವೀಕ್ಷಿಸಿದರು. ಇದೇ ಸಂದರ್ಭ ಚಂದ್ರಶೇಖರ ಹೆಗ್ಡೆ ಅವರು ಡಾ. ಕುಲಾಲರನ್ನು ಶಾಲು ಹೊದಿಸಿ ಅಭಿನಂದಿಸಿದರು. ಮೂಲತಃ ಕಾಳಾವರ ಸಮೀಪದ ಕಟ್ಕೇರಿಯವರಾದ ಡಾ. ರಾಮಕೃಷ್ಣ ಕುಲಾಲ್ ತಮ್ಮ ಬಾಲ್ಯದಲ್ಲಿ ಕಾಳಾವರ ಷಷ್ಠಿಗೆ ಮನೆಯವರೊಂದಿಗೆ ಬರುತ್ತಿದ್ದುದನ್ನು ನೆನಪಿಸಿಕೊಂಡರು. ಬಿ.ಕೆ. ರಾಘವೇಂದ್ರ ಉಪಸ್ಥಿತರಿದ್ದರು.