ಡೈಲಿ ವಾರ್ತೆ:18 ಜೂನ್ 2023

ಅನ್ನಭಾಗ್ಯ ಯೋಜನೆಗೆ ಕೇಂದ್ರ ಬಿಜೆಪಿ ಸರಕಾರದ ಅಡ್ಡಗಾಲು – ಕುಂದಾಪುರ ಬ್ಲಾಕ್ ಕಾಂಗ್ರೆಸ್ ಖಂಡನೆ:ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ

ಅನ್ನಭಾಗ್ಯಕಾಂಗ್ರೆಸ್ ಪಕ್ಷದ 2023 ರ ಚುನಾವಣೆಯ ಮಹತ್ವಾಂಕ್ಷಿ ಗ್ಯಾರಂಟಿ ಯೋಜನೆಯಾಗಿದ್ದು , ಅಧಿಕಾರಕ್ಕೆ ಬಂದನಂತರ ಸಿದ್ದರಾಮಯ್ಯ ನೇತ್ರತ್ವದ ಸರಕಾರ ಅನುಷ್ಟಾನಕ್ಕೆ ಜುಲೈ 1 ರಿಂದ ಆದೇಶಿಸಿದೆ. ಕೇಂದ್ರದ ಬಿಜೆಪಿ ಸರಕಾರ ಅನ್ನಭಾಗ್ಯ ಯೋಜನೆಗೆ ಅಕ್ಕಿ ಸರಬರಾಜು ಮಾಡಲು ಒಪ್ಪದಿರುವುದು ಖಂಡನೀಯ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವುದನ್ನು ಸಹಿಸಲಾಗದ ಕೇಂದ್ರ ಬಿಜೆಪಿ ಸರಕಾರ ಅದರ ಅಧೀನ ಸಂಸ್ಥೆಯಾದ ಎಫ್. ಸಿ. ಐ. ಗೆ ಕರ್ನಾಟಕ ರಾಜ್ಯ ಕ್ಕೆ ಹೆಚ್ಚುವರಿ ಪಡಿತರ ಅಕ್ಕಿ ಸರಬರಾಜು ಮಾಡದಂತೆ ತಾಕೀತು ಮಾಡಿರುವುದು ಒಕ್ಕೂಟ ವ್ಯವಸ್ಥೆಯಲ್ಲಿ ಸರಿಯಾದ ಕ್ರಮ ಅಲ್ಲ . ರಾಜ್ಯದ ಬಡವರ ಪಾಲಿನ ಪಡಿತರ ಯೇಜನೆಯಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಾದ ಕ್ರಮ ಅಲ್ಲ. ಪ್ರಧಾನಿ ನರೇಂದ್ರ ಮೋದಿಯವರು ರಾಜಧರ್ಮ ಪಾಲನೆ ಮಾಡಬೇಕು .

ಯಾವುದೇ ಹೊಸ ಯೋಜನೆಗಳ ಅನುಷ್ಟಾನ ಸಂದರ್ಭದಲ್ಲಿ ಗೊಂದಲಗಳು ಸಾಮಾನ್ಯ . ಹಿಂದೆ ಎಸ್. ಎಂ. ಕ್ರಷ್ಣ ನೇತ್ರತ್ವದ ಕಾಂಗ್ರೆಸ್ ಸರಕಾರದ “ಬಿಸಿಯೂಟ ” ಯೋಜನೆ ಪ್ರಾರಂಭದ ಸಂದರ್ಭದಲ್ಲಿ ಗೊಂದಲವಿತ್ತು ನಂತರ ಅದು ಅತ್ಯಂತ ಯಶಸ್ವಿ ಯೋಜನೆಯಾಯಿತು .

ರಾಜ್ಯದ ಕಾಂಗ್ರೆಸ್ ಸರಕಾರ ಚುನಾವಣಾ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿಗಳು ಕೆಲವೇ ತಿಂಗಳುಗಳಲ್ಲಿ ಕರ್ನಾಟಕದ ಎಲ್ಲಾ ವರ್ಗದ ಜನರಿಗೆ ಯಶಸ್ವಿಯಾಗಿ ಅನುಷ್ಟಾನವಾಗಲಿದೆ ಎಂದು ಅವರು ತಿಳಿಸಿರುತ್ತಾರೆ.