ಡೈಲಿ ವಾರ್ತೆ: 27 ಜೂನ್ 2023

ಪಾವಗಡ: ಕೆರೆಯಲ್ಲಿ ಮುಳುಗಿ ಬಾಲಕ ಮೃತ್ಯು

ಪಾವಗಡ: ಪಾವಗಡ ಪಟ್ಟಣದ ಸಾಯಿಬಾಬ ದೇವಸ್ಥಾನದ ಹಿಂಭಾಗದಲ್ಲಿ ಇರುವಂತಹ ಅಗಸರಕುಂಟೆಯಲ್ಲಿ 13 ವರ್ಷದ ಉಜ್ವಲ್ ಎನ್ನುವ ಬಾಲಕ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ, ಸತತ ಎರಡು ಗಂಟೆಗಳ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರ ಶೋಧ ಕಾರ್ಯದಿಂದ ಬಾಲಕನ ಮೃತ ದೇಹ ಪತ್ತೆಯಾಗಿದೆ.

ಸಾಯಿ ಬಾಬಾ ದೇವಸ್ಥಾನಕ್ಕೆ ತನ್ನ ಗೆಳೆಯರೊಟ್ಟಿಗೆ ಬಂದಿದ್ದ ಉಜ್ವಲ್ ನೀರಿನಲ್ಲಿ ಆಟ ಆಡುವಾಗ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ, ಮೃತ ಉಜ್ವಾಲ್ ತಂದೆ ರಮೇಶ್ ಅವರು ಪಾವಗಡ ಪಟ್ಟಣದಲ್ಲಿ ಇಟ್ಟಿಗೆ ಕಲ್ಲು ಟ್ರಾನ್ಸ್ಪೋರ್ಟ್ ಕೆಲಸ ಮಾಡುತ್ತಿದ್ದು ಇವರು ಮೂಲತಃ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಮಡಕಶಿರಾದವರು ಎಂದು ಮಾಹಿತಿ ಲಭ್ಯವಾಗಿದೆ, ಇವರು ಕುಂಟೆ ಹತ್ತಿರ‌ ಬಾಡಿಗೆ ಇದ್ದಾರೆ.

ಕೆರೆಯ ಬಳಿಯ ಕುಟುಂಬಸ್ಥರ ಆಗ್ರಂದನ ಮುಗಿಲು ಮುಟ್ಟಿದೆ. ಎರಡು ವರ್ಷಗಳಲ್ಲಿ ಒಬ್ಬ ಮಹಿಳೆ ಇಬ್ಬರು ಬಾಲಕರು ಸೇರಿದಂತೆ ಒಟ್ಟು ಮೂರು ಜನರನ್ನು ಅಗಸರ ಕುಂಟೆ ಬಲಿಪಡಿದುಕೊಂಡಂತಾಗಿದೆ ಪಾವಗಡ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.