ಡೈಲಿ ವಾರ್ತೆ: 21 ಜುಲೈ 2023

ವಿಶ್ವ ಜಾಂಬೂರಿಗೆ ತೆರಳುವ ಬಿ.ಎಂ.ತುಂಬೆ ಅವರಿಗೆ ಬಂಟ್ವಾಳ ಜಮೀಯತ್ತುಲ್ ಫಲಾಹ್ ನಿಂದ ಬೀಳ್ಕೊಡುಗೆ

ಬಂಟ್ವಾಳ : ದಕ್ಷಿಣ ಕೊರಿಯಾದ ಸೀಮನ್ ಗಾಮ್ ನಲ್ಲಿ 15 ದಿವಸದ ಕಾಲ ನಡೆಯುವ ಸ್ಕೌಟ್ ಮತ್ತು ಗೈಡ್ಸ್ 25 ನೇ ವಿಶ್ವ ಜಾಂಬೂರಿಯಲ್ಲಿ ಭಾಗವಹಿಸಲು ಭಾರತದ ಪ್ರತಿನಿಧಿಯಾಗಿ ತೆರಳುತ್ತಿರುವ ನಿವೃತ್ತ ಶಿಕ್ಷಕರೂ, ಬಂಟ್ವಾಳ ಜಮೀಯತ್ತುಲ್ ಫಲಾಹ್ ನ ಪೂರ್ವಾಧ್ಯಕ್ಷರೂ ಆಗಿರುವ ಬಿ. ಮೊಹಮ್ಮದ್ ತುಂಬೆ ಅವರನ್ನು ಸನ್ಮಾನಿಸಲಾಯಿತು.

ಮೆಲ್ಕಾರ್ ಎಂ.ಎಚ್. ಕಂಪೌಂಡ್ ನಲ್ಲಿ ಶುಕ್ರವಾರ ನಡೆದ ಬಂಟ್ವಾಳ ತಾಲೂಕು ಜಮೀಯತುಲ್ ಫಲಾಹ್ ನ ಸಭೆ ಹಾಗೂ ಬೀಳ್ಕೊಡುವ ಸಮಾರಂಭದಲ್ಲಿ ಸಭಾಧ್ಯಕ್ಷತೆ ವಹಿಸಿದ್ದ ಘಟಕದ ಅಧ್ಯಕ್ಷ ರಶೀದ್ ವಿಟ್ಲ ಅವರು ಬಿ. ಮೊಹಮ್ಮದ್ ತುಂಬೆ ಅವರನ್ನು ಸನ್ಮಾನಿಸಿದರು.

ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಅವರು ಅಭಿನಂದನಾ ಮಾತುಗಳನ್ನಾಡಿದರು. ಜಮೀಯತ್ತುಲ್ ಫಲಾಹ್ ಜಿಲ್ಲಾ ಕೇಂದ್ರ ಸಮಿತಿಯ ಪೂರ್ವಾಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಘಟಕದ ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್, ಘಟಕದ ಪೂರ್ವಾಧ್ಯಕ್ಷರುಗಳಾದ ರಫೀಕ್ ಹಾಜಿ ಆಲಡ್ಕ, ನೋಟರಿ ಅಬೂಬಕರ್ ವಿಟ್ಲ, ಸುಲೈಮಾನ್ ಸೂರಿಕುಮೇರು, ಪಿ.ಮಹಮ್ಮದ್ ಪಾಣೆಮಂಗಳೂರು, ಆಸಿಫ್ ಇಕ್ಬಾಲ್ ಫರಂಗಿಪೇಟೆ, ಉಪಾಧ್ಯಕ್ಷ ಶೇಖ್ ರಹ್ಮತುಲ್ಲಾ ಕಾವಳಕಟ್ಟೆ, ಅಬ್ಬಾಸ್ ಅಲಿ ಬೋಳಂತೂರು, ಮಹಮ್ಮದ್ ನಾರಂಕೋಡಿ, ಅಹ್ಮದ್ ಮುಸ್ತಫಾ ಗೋಳ್ತಮಜಲು ಈ ಸಂದರ್ಭ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಕೆ.ಕೆ. ಶಾಹುಲ್ ಹಮೀದ್ ಸ್ವಾಗತಿಸಿದರು. ಉಪಾಧ್ಯಕ್ಷ ಲತೀಫ್ ನೇರಳಕಟ್ಟೆ ವಂದಿಸಿದರು.