ಡೈಲಿ ವಾರ್ತೆ:22 ಜುಲೈ 2023

ಭಜರಂಗದಳದ ಮೂವರಿಗೆ ಗಡಿಪಾರು ನೋಟಿಸ್- ಸಿಡಿದೆದ್ದ ಹಿಂದೂ ಸಂಘಟನೆಗಳು

ಮಂಗಳೂರು: ಇಲ್ಲಿನ ಮೂವರು ಭಜರಂಗದಳದ ಕಾರ್ಯಕರ್ತರ ಗಡಿಪಾರು ವಿಚಾರ ಇದೀಗ ರಾಜ್ಯಾದ್ಯಂತ ಚರ್ಚೆಯಾಗ್ತಿದೆ. ಇದೊಂದು ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ಎಂದು ಆಕ್ರೋಶ ವ್ಯಕ್ತವಾಗಿದೆ. ಸರ್ಕಾರದ ಈ ನಡೆಗೆ ಹಿಂದೂ ಸಂಘಟನೆಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಮಂಗಳೂರಲ್ಲಿ ನೈತಿಕ ಪೊಲೀಸ್‍ಗಿರಿ ನಡೆಸಿದ್ದ ಭಜರಂಗದಳದ ಮೂವರು ಕಾರ್ಯಕರ್ತರನ್ನು ಗಡಿಪಾರು ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಇತ್ತೀಚೆಗೆ ಸುಲ್ತಾನ್ ಜ್ಯುವೆಲ್ಲರಿಯ ಕಾರ್ಯಕ್ರಮ ಹಾಗೂ ಮರೋಳಿ ಹೋಳಿ ಆಚರಣೆ ವೇಳೆ ಭಜರಂಗದಳದ ಬಾಲಚಂದ್ರ ಅತ್ತಾವರ, ಗಣೇಶ್ ಅತ್ತಾವರ, ಜಯಪ್ರಕಾಶ್ ಶಕ್ತಿನಗರ ಎನ್ನುವವರು ನೈತಿಕ ಪೊಲೀಸ್‍ಗಿರಿ ಪ್ರದರ್ಶಿಸಿದ್ರು. ಈ ಬೆನ್ನಲ್ಲೇ ಪದೇ ಪದೇ ಕಾನೂನುಭಂಗ ಮಾಡ್ತಿರೋ ನಿಮ್ಮನ್ನು ಏಕೆ ಗಡಿಪಾರು ಮಾಡಬಾರದು, ಉತ್ತರಿಸಿ ಎಂದು ನೊಟೀಸ್ ಜಾರಿ ಮಾಡಿದೆ.

ಮಂಗಳೂರು ಪೊಲೀಸ್ ಆಯುಕ್ತರು ಮಾತ್ರ ತಮ್ಮ ಕ್ರಮವನ್ನು ಸಮರ್ಥಿಸಿದ್ದಾರೆ. ಅವರು ನಮಗೆ ಆರೋಪಿಗಳಷ್ಟೇ ಅವರು ಯಾವ ಸಂಘಟನೆ ಅನ್ನೋದು ನಮಗೆ ಬೇಡ ಎಂದು ತಿಳಿಸಿದ್ದಾರೆ.

ಗಡಿಪಾರು ನೊಟೀಸ್‍ಗೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಗೋಹತ್ಯೆ ವಿರುದ್ಧ ಕಾನೂನು ಇದೆ, ಅಕ್ರಮ ಗೋಹತ್ಯೆ ಮಾಡೋದನ್ನು ನೋಡಿ ಸುಮ್ಮನಿರಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ಈವರೆಗೆ ಪೊಲೀಸರಿಗೆ ತಿಳಿಸಿಯೇ ದಾಳಿ ಮಾಡುತ್ತಿದ್ದೆವು. ಇನ್ನು ಪೊಲೀಸರಿಗೆ ತಿಳಿಸದೆ ದಾಳಿ ಮಾಡ್ತೀವಿ ಅಂತ ಎಚ್ಚರಿಕೆ ನೀಡಿದ್ದಾರೆ.

ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬಜರಂಗದಳ ಕಾರ್ಯಕರ್ತರ ಗಡಿಪಾರಿಗೆ ನೋಟಿಸ್ ನೀಡಲು ಅವರೇನು ಕೊಲೆ ಮಾಡಿದ್ದಾರಾ, ರೇಪ್ ಮಾಡಿದ್ದಾರಾ, ಉಗ್ರಗಾಮಿಗಳ ತರ ಬಾಂಬ್‍ಗಳನ್ನು ತಯಾರು ಮಾಡ್ತಾರಾ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಭಜರಂಗದಳದ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಹೆದರಿಸೋ ಕೆಲಸ ಮಾಡ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಎಷ್ಟು ಜನ್ರನ್ನ ಸರ್ಕಾರ ಗಡಿಪಾರು ಮಾಡುತ್ತೆ ಎಂದು ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದೂ ಸಂಘಟನೆಗಳ ಮೇಲೆ ಸಮರ ಸಾರಲು ಮುಂದಾಗಿದೆ. ಹಿಂದೂ ಸಂಘಟನೆಗಳೂ ಇದಕ್ಕೆ ತಕ್ಕ ಉತ್ತರ ಕೊಡಲು ಮುಂದಾಗಿದೆ. ಈ ವಿಚಾರ ಇನ್ಯಾವ ಮಟ್ಟಕ್ಕೆ ಹೋಗುತ್ತೆ ಅನ್ನೋ ಆತಂಕ ಮನೆ ಮಾಡಿದೆ.