ಡೈಲಿ ವಾರ್ತೆ:22 ಜುಲೈ 2023

ಉಡುಪಿ:ಸಾರ್ವಜನಿಕ ಸ್ಥಳದಲ್ಲಿ ಜಗಳ – ಬಸ್‌ ಚಾಲಕ,ನಿರ್ವಾಹಕರು ವಶಕ್ಕೆ

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಜಗಳವಾಡುತ್ತಿದ್ದ ಬಸ್‌ ಚಾಲಕ ಹಾಗೂ ನಿರ್ವಾಹಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ನಗರದ ಹಳೇ ತಾಲೂಕು ಕಚೇರಿಯ ಬಸ್‌ ನಿಲ್ದಾಣದ ಬಳಿ ಎರಡು ಬಸ್‌ನವರು ಜಗಳವಾಡುತ್ತಿರುವುದರ ಬಗ್ಗೆ ಸಾರ್ವಜನಿಕರೊಬ್ಬರು ಕರೆ ಮಾಡಿ ತಿಳಿಸಿದ ಮೇರೆಗೆ ಪೊಲೀಸರು ಆಗಮಿಸಿದ್ದಾರೆ.

ಈ ವೇಳೆ ಎರಡು ಖಾಸಗಿ ಬಸ್‌ಗಳ ಚಾಲಕ ಹಾಗೂ ನಿರ್ವಾಹಕರಾದ ಹರ್ಕಾಡಿಯ ಮನೋಜ್‌ (24), ಕಾವ್ರಾಡಿಯ ಪ್ರವೀಣ್‌ (27), ಕೊಂಬುಗುಡ್ಡೆಯ ಎಚ್‌. ಮಂಜುನಾಥ (40), ಪಳ್ಳಿಯ ಶರತ್‌ ಆಚಾರ್ಯ (29), ಮಧು ಇವರು ತಮ್ಮೊಳಗೆ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಭಯದ ವಾತಾವರಣ ಉಂಟುಮಾಡುತ್ತಿದ್ದರು.

ಪೊಲೀಸ್‌ ಸಿಬಂದಿ ಎದುರಿನಲ್ಲಿಯೇ ಪರಸ್ಪರ ಬೈದಾಡುತ್ತಾ ದೂಡಾಡಿಕೊಂಡು ಕೈ-ಕೈ ಮಿಲಾಯಿಸುತ್ತಿದ್ದರು ಎಂದು ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.