ಡೈಲಿ ವಾರ್ತೆ: 23 ಜುಲೈ 2023

ಗ್ಯಾಸ್ ಕಟರ್ ಬಳಸಿ ATMನಲ್ಲಿದ್ದ 15 ಲಕ್ಷ ದರೋಡೆ

ಕೋಲಾರ: ಗ್ಯಾಸ್ ಕಟರ್ ಬಳಸಿ ಎಟಿಎಂನಲ್ಲಿದ್ದ ಲಕ್ಷಾಂತರ ರೂ. ದರೋಡೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹಂಚಾಳ ಗೇಟ್‌ನಲ್ಲಿ ಕೆನರಾ ಬ್ಯಾಂಕ್ ಎಟಿಎಂನ ಮಿಷನ್ ಅನ್ನು ಗ್ಯಾಸ್ ಕಟರ್‌ನಿಂದ ತೆರೆದು ಹಣ ಕಳ್ಳತನ ಮಾಡಲಾಗಿದೆ. ಎಟಿಎಂನಲ್ಲಿದ್ದ ಸುಮಾರು 15 ಲಕ್ಷ ರೂ. ಹಣ ಎಗರಿಸಿರುವ ಮಾಹಿತಿಯನ್ನು ಬ್ಯಾಂಕ್ ಸಿಬ್ಬಂದಿ ನೀಡಿದ್ದು, ಸ್ಥಳಕ್ಕೆ ಕೆಜಿಎಫ್ ಡಿವೈಎಸ್‌ಪಿ ರಮೇಶ್ ಸೇರಿದಂತೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಾಣಿಜ್ಯ ಮಳಿಗೆ ಕಟ್ಟಡದಲ್ಲಿ ಸಿಸಿಟಿವಿ ಇಲ್ಲದ್ದನ್ನು ಕಂಡು ಮಾಲೀಕರಿಗೆ ಪಬ್ಲಿಕ್ ಸೇಫ್ಟಿ ಆಕ್ಟ್ ಅಡಿ ನೋಟಿಸ್ ನೀಡುವಂತೆ ಬಂಗಾರಪೇಟೆ ಪೊಲೀಸರಿಗೆ ಡಿವೈಎಸ್‌ಪಿ ರಮೇಶ್ ಸೂಚನೆ ನೀಡಿದ್ದಾರೆ.
ಈ ಹಿಂದೆ ಇದೆ ಜಾಗದಲ್ಲಿ ಕಿಡಿಗೇಡಿಗಳು ರಾತ್ರಿ 11 ಗಂಟೆ ಸಮಯದಲ್ಲಿ ಎಟಿಎಂ ಹಣ ಡ್ರಾ ಮಾಡಿ ಈಚೆ ಬರುತ್ತಿದ್ದ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ 5 ಸಾವಿರ ರೂ. ದೋಚಿದ್ದ ಘಟನೆ ಕೂಡ ವರದಿಯಾಗಿತ್ತು.

ಇತ್ತೀಚೆಗೆ ಚಿಂತಾಮಣಿ ಹಾಗೂ ಕೋಲಾರದಲ್ಲಿ ಎಟಿಎಂಗಳಿಗೆ ಕನ್ನ ಹಾಕಿದ್ದ ಕಿಡಿಗೇಡಿಗಳು ಲಕ್ಷಾಂತರ ರೂ. ಹಣ ದೋಚಿ ಪರಾರಿಯಾಗಿದ್ರು. ಇನ್ನೂ ಬಂಗಾರಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.