ಡೈಲಿ ವಾರ್ತೆ:29 ಜುಲೈ 2023

ಬ್ರಹ್ಮಾವರ: ಸೈಬರ್‌ ಅಪರಾಧ ಜಾಗೃತಿ ಕಾರ್ಯಾಗಾರ – ತಿಳುವಳಿಕೆ ಇದ್ದವರೇ ಸೈಬರ್‌ ಅಪರಾಧದಿಂದ ವಂಚನೆಗೊಳಗಾಗುವುದು ಹೆಚ್ಚು: ಜಯಪ್ರಕಾಶ ಹೆಗ್ಡೆ

ಬ್ರಹ್ಮಾವರ :ತಾಂತ್ರಿಕತೆ ಅಭಿವೃದ್ಧಿ ಹೊಂದಿದ ಹಾಗೆ ಅದರ ದುರುಪಯೋಗವೂ ಹೆಚ್ಚುತ್ತಿದೆ. ಮೊಬೈಲ್ ಇನ್ನಿತರ ಸಾಧನಗಳಲ್ಲಿ ಆನ್‌ಲೈನ್‌ ಮೂಲಕ ವ್ಯವರಿಸುವಾಗ ಜಾಗ್ರತೆ ವಹಿಸಿದಲ್ಲಿ ನಾವು ಸರುಕ್ಷಿತವಾಗಿರುತ್ತೇವೆ ಎಂದು ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಹೇಳಿದರು.

ಬ್ರಹ್ಮಾವರದ ಮದರ್‌ ಪ್ಯಾಲೇಸ್‌ನ ಸಭಾಂಗಣದಲ್ಲಿ ಜು. 29 ರಂದು ಶನಿವಾರ ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಜತ ಮಹೋತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಬ್ರಹ್ಮಾವರದ ಮದರ್‌ ಪ್ಯಾಲೇಸ್‌, ಬ್ರಹ್ಮಾವರ ರೋಟರಿ ಕ್ಲಬ್‌, ರಾಯಲ್‌ ರೋಟರಿ ಬ್ರಹ್ಮಾವರದ ಸಹಕಾರದೊಂದಿಗೆ ನಡೆದ ಸೈಬರ್‌ ಅಪರಾಧ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ತಿಳುವಳಿಕೆ ಇದ್ದವರೇ ಹೆಚ್ಚು ಸೈಬರ್ ಅಪರಾಧಕ್ಕೆ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಿದಲ್ಲಿ ಮಾತ್ರ ಇಂತಹ ಕೃತ್ಯಗಳಿಂದ ಮೋಸ ಹೋಗುವುದರಿಂದ ತಪ್ಪಿಸಿಕೊಳ್ಳಬಹುದು ಎಂದು ಹೇಳಿದರು.


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಉಡುಪಿ ಸೆನ್‌ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ಮಂಜುನಾಥ ಮಾತನಾಡಿ ಸೈಬರ್ ಕ್ರೈಮ್ ಗಳನ್ನು ಹೆಚ್ಚಾಗಿ ಉತ್ತರ ಭಾರತದ ವ್ಯಕ್ತಿಗಳು ಮಾಡುತ್ತಿದ್ದು, ಈ ಬಗ್ಗೆ ನಾವು ಎಚ್ಚರದಿಂದ ಇರಬೇಕು. ಯೋಚನೆ, ಎಚ್ವರದಿಂದ ಇದ್ದಾಗ ಮಾತ್ರ ಇಂತಹ ಅಪರಾಧಗಳಿಂದ ವಂಚಿತರಾಗುವುದಿಲ್ಲ. ಫೇಸ್‌ ಬುಕ್‌, ಇ ಮೈಲ್‌, ಬ್ಯಾಂಕಿಂಗ್‌ ಸಂಬಂದದ ಸೈಬರ್ ಅಪರಾಧ ಪ್ರಕರಣಗಳನ್ನು ಎರಡು ಗಂಟೆ ಒಳಗೆ  1930 ಗೆ ಕಾಲ್ ಮಾಡಿ ದೂರು ನೀಡಿದಲ್ಲಿ ವಂಚಿತರಾಗುವುದರಿಂದ ತಡೆಯಬಹುದು. ಪೊಲೀಸ್ ಇಲಾಖೆ ಅಪರಾಧಿಯ ಪತ್ತೆ ಮಾಡುತ್ತದಾದರೂ, ಸಾರ್ವಜನಿಕರ ಸಹಕಾರವೂ ಇದಕ್ಕೆ ಅಗತ್ಯವಾಗಿದೆ ಮತ್ತು ಇಂತಹ‌ ಮೋಸ ಮಾಡುವ ಜಾಲದಿಂದ ನಾವು ರಕ್ಷಿಸಿಕೊಳ್ಳಬಹುದು ಎಂದು ತಿಳಿಸಿದರು.
 

ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಗಾಣಿಗ ಅಚ್ಲಾಡಿ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಶೆಟ್ಟಿ, ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಮೊಹಮ್ಮದ್‌ ಶರೀಫ್ ಕಾರ್ಕಳ, ಬ್ರಹ್ಮಾವರ ರೋಟರಿ  ಅಧ್ಯಕ್ಷ  ಉದಯ ಕುಮಾರ ಶೆಟ್ಡಿ, ರೋಟರಿ ರಾಯಲ್ ನ ಅಧ್ಯಕ್ಷ ಅಭಿರಾಮ್, ಅಜಪುರ ಕರ್ನಾಟಕ ಸಂಘದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ ಇದ್ದರು.
ಗೌರವಾಧ್ಯಕ್ಷ ಪ್ರಭಾಕರ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ತಾಲ್ಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಹರೀಶ ಕಿರಣ ತುಂಗ ವಂದಿಸಿದರು. ಉಪಾಧ್ಯಕ್ಷ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬ್ರಹ್ಮಾವರದ ಹಿರಿಯ ನಾಗರಿಕರ ಸಂಘ, ಹಾರಾಡಿಯ ಭೂಮಿಕಾ, ಅಜಪುರ ಕನ್ನಡ ಸಂಘ, ಟ್ಯಾಕ್ಸಿಮೆನ್‌ ಅಸೋಸಿಯೇಶನ್‌, ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಪದಾಧಿಕಾರಿಗಳು ಸಹಕರಿಸಿದರು.