ಡೈಲಿ ವಾರ್ತೆ:30 ಜುಲೈ 2023

ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಉರುಳಿ ಬಿದ್ದ ಕಾರು: ನಾಲ್ವರು ಮಹಿಳೆಯರ ಸಾವು.!

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿಯಲ್ಲಿ ಕಾರೊಂದು ವಿಸಿ ನಾಲೆಗೆ ಬಿದ್ದು ನಾಲ್ವರು ಮಹಿಳೆಯರು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.

ಮೃತರು ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಗೊರವನಹಳ್ಳಿಯ ಸಂಜನಾ (17), ಮಮತಾ (45), ಮಹಾದೇವಿ (55), ರೇಖಾ (36) ಎಂದು ತಿಳಿದುಬಂದಿದೆ. ಇನ್ನೂ ಕಾರಿನಲ್ಲಿದ್ದ ಚಾಲಕ ಮನೋಜ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಆದಿಚುಂಚನಗಿರಿಯಲ್ಲಿ ಏರ್ಪಡಿಸಿದ್ದ ದೇವತಾ ಕಾರ್ಯಕ್ಕೆ ಆಹ್ವಾನಿಸಲು ಗೊರವನಹಳ್ಳಿಯಿಂದ ದೊಡ್ಡ ಮುಲಗೂಡು ಗ್ರಾಮಕ್ಕೆ ಇವರು ಹೋಗುತ್ತಿದ್ದರು ಎಂದು ತಿಳಿದುಬಂದಿದೆ.

ರಾತ್ರಿ 8ರ ಸುಮಾರಿಗೆ ಗಾಮನಹಳ್ಳಿ ಗ್ರಾಮದ ನಾಲೆ ಏರಿಯ ತಿರುವಿನಲ್ಲಿ ಕಬ್ಬಿಣದ ತಾತ್ಕಾಲಿಕ ತಡೆಗೋಡೆಗೆ ಗುದ್ದಿ ಕಾರು ನಾಲೆಗೆ ಉರುಳಿ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗ್ರಾಮಸ್ಥರು ಅದರಲ್ಲಿದ್ದವರನ್ನು ಮೇಲೆತ್ತುವ ಪ್ರಯತ್ನ ಮಾಡಿದರು. ಅಷ್ಟರಲ್ಲಿ ನಾಲ್ವರು ಮೃತಪಟ್ಟಿದ್ದು, ಚಾಲಕನನ್ನು ರಕ್ಷಿಸುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.
ಸ್ಥಳಕ್ಕೆ ಅರಕೆರೆ ಠಾಣೆ ಪೊಲೀಸರು ಭೇಟಿ ನೀಡಿದ್ದರು.