ಡೈಲಿ ವಾರ್ತೆ:31 ಜುಲೈ 2023

ದಕ್ಷಿಣ ಕನ್ನಡ: ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯ – ಮೂವರು ಆರೋಪಿಗಳು ಸೆರೆ

ಮಂಗಳೂರು: ರಾಜ್ಯದಲ್ಲಿ ಇದೀಗ ಉಡುಪಿ ಸಂಬಂಧಿತ ಸುದ್ದಿಯೇ ಹರಿದಾಡುತ್ತಿದ್ದು, ಆ ಪ್ರಕರಣವನ್ನು ಪೊಲೀಸರ ನೂತನ ತನಿಖಾ ತಂಡ ಆಳವಾಗಿ ವಿಚಾರಣೆ ನಡೆಸುತ್ತಿದೆ. ಅಲ್ಲೂ ಯುವತಿ ಶೌಚಾಲಯದಲ್ಲಿದ್ದಾಗ ವಿಡಿಯೋ ಮಾಡಲಾಗಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು.

ಈ ನಡುವೆ ಮಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆ ನಡದಿದ್ದು ಅಪ್ರಾಪ್ತ ವಯಸ್ಕಳ ಮೇಲೆ ಮೂವರು ಯುವಕರು ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ. ಅಪ್ರಾಪ್ತ ಬಾಲಕಿ ಮೇಲೆ ಮೂವರು ಯುವಕರು ಅತ್ಯಾಚಾರ ಎಸಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸದ್ಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಮೂವರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ ಎನ್ನಲಾಗಿದ್ದು ಮೂವರು ಬಂಧಿತ ಆರೋಪಿಗಳನ್ನು ಅಕ್ಷಯ್ ದೇವಾಡಿಗ (24), ಕಮಲಾಕ್ಷ ಬೆಳ್ಚಾಡ (30), ಸುಕುಮಾರ ಬೆಳ್ಚಾಡ (28) ಬಂಧಿಸಲಾಗಿದೆ.

ಈ ಮೂವರು, 2019ರಿಂದ ನಿರಂತರವಾಗಿ ವಿವಿಧ ಕಡೆ ಅತ್ಯಾಚಾರ ಎಸಗಿದ್ದರು ಎನ್ನುವ ಆರೋಪವೂ ಕೇಳಿಬಂದಿದೆ. ಸದ್ಯ ಇವರ ವಿರುದ್ಧ ಪೋಕ್ಸೋ ಹಾಗೂ ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.