ಡೈಲಿ ವಾರ್ತೆ:31 ಜುಲೈ 2023

ಉಪ್ಪುಂದ: ಕರ್ಕಿಕಳಿಯಲ್ಲಿ ದೋಣಿ ದುರಂತ – ಓರ್ವ ಸಾವು ಇನ್ನೋರ್ವ ನಾಪತ್ತೆ!

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಕರ್ಕಿಕಳಿ ಎಂಬಲ್ಲಿ ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದ ಸಂದರ್ಭ ದೋಣಿ ದುರಂತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇನ್ನೋರ್ವ ನಾಪತ್ತೆಯಾದ ಘಟನೆ ಸೋಮವಾರ ಸಂಜೆ ನಡೆದಿದೆ.

ಸಚಿನ್ ಖಾರ್ವಿ ಮಾಲಿಕತ್ವದ ಮರ್ಲುಚಿಕ್ಕು ಹೆಸರಿನ ನಾಡದೋಣಿಯ ಮೂಲಕ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿ ಸಂಜೆ ಹಿಂದಿರುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸಮುದ್ರದಲೆಗಳ ಹೊಡೆತಕ್ಕೆ ದೋಣಿ ಮಗುಚಿ ಬಿದ್ದು ದುರಂತ ನಡೆದಿದ್ದು, ದೋಣಿಯಡಿಗೆ ಸಿಲುಕಿದ್ದ ನಾಗೇಶ್ ಬಾಬು ಖಾರ್ವಿ (30) ಮೃತಪಟ್ಟಿದ್ದು, ಸತೀಶ್ ಖಾರ್ವಿ (34) ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ದೋಣಿಯಲ್ಲಿ 8 ಮಂದಿ ಮೀನುಗಾರಿಕೆಗೆ ತೆರಳಿದ್ದು, ದಡಕ್ಕೆ ಸಮೀಪವಿರುವಾಗ ದುರಂತ ನಡೆದಿದೆ. 6 ಮಂದಿ ಈಜಿ ದಡ ಸೇರಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೀನುಗಾರರು ದುರಂತಕ್ಕೀಡದ ದೋಣಿಯನ್ನು ದಡಕ್ಕೆ ಎಳೆದು ತಂದಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕದಳ ಕರಾವಳಿ ಕಾವಲು ಪಡೆ ಪೊಲೀಸರು ಭೇಟಿ ನೀಡಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.