ಡೈಲಿ ವಾರ್ತೆ:04 ಆಗಸ್ಟ್ 2023

ವರದಿ: ಅದ್ದಿ ಬೊಳ್ಳೂರು

ಹಳೆಯಂಗಡಿ: ನಾಪತ್ತೆಯಾದ ವ್ಯಕ್ತಿ ಶವವಾಗಿ ಪತ್ತೆ!


ಹಳೆಯಂಗಡಿ:ಕಳೆದ 9 ದಿನಗಳಿಂದ ನಾಪತ್ತೆಯಾದ ವ್ಯಕ್ತಿ ಪಾವಂಜೆ ಬಳಿಯ ರಾಷ್ಟ್ರೀಯ ಹೆದ್ದಾರಿ 66 ಪಕ್ಕದ ಪಾಳುಬಿದ್ದ ಮನೆಯಲ್ಲಿ ಗುರುವಾರ ಶವವಾಗಿ ಪತ್ತೆಯಾಗಿದ್ದಾರೆ.

ಮೃತ ವ್ಯಕ್ತಿಯನ್ನು ಮುಲ್ಕಿಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಗ್ರಾಮದ ಪಾವಂಜೆ ಕದ್ರಾತೋಟ ನಿವಾಸಿ ದೇವದಾಸ್ ಕುಲಾಲ್ (52) ಎಂದು ತಿಳಿದುಬಂದಿದೆ.

ಕಳೆದ ಜುಲೈ 25ರಂದು ಕದ್ರಾ ತೋಟದ ತನ್ನ ಮನೆಯಿಂದ ಕೆಲಸಕ್ಕೆಂದು ಹೋದವರು ನಿಗೂಢವಾಗಿ ನಾಪತ್ತೆಯಾಗಿದ್ದು, ಗುರುವಾರ ಪಾವಂಜೆ ಪರಿಸರದಲ್ಲಿ ದುರ್ವಾಸನೆ ಬರುತ್ತಿರುವುದನ್ನು ಕಂಡು ಸ್ಥಳೀಯರು ಅನುಮಾನಾಸ್ಪದವಾಗಿ ಹುಡುಕಾಡಿದಾಗ ಪಾಳು ಬಿದ್ದ ಮನೆಯೊಳಗೆ ತೀರಾ ಕೊಳೆತ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದೆ.

ಶವ ಪತ್ತೆಯಾದ ಸ್ಥಳದಲ್ಲಿ ಕೀಟನಾಶಕ ಪ್ಯಾಕೆಟ್ ಮತ್ತು ಎರಡು ಪ್ಲಾಸ್ಟಿಕ್ ಬಾಟಲಿಗಳು ಪತ್ತೆಯಾಗಿದ್ದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ.

ಮೃತ ಪತ್ನಿ ಮತ್ತು ಸಂಬಂಧಿಕರು ದೇವದಾಸ್ ಅವರ ಅಂಗಿ, ಪ್ಯಾಂಟ್ ನಿಂದ ಶವ ಗುರುತಿಸಲಾಗಿದ್ದು ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸಾಮಾಜಿಕ ಕಾರ್ಯಕರ್ತರಾದ ಆಪತ್ಬಾಂಧವ ಆಸಿಫ್ ಹಾಗು ಅದ್ದಿ ಬೊಳ್ಳೂರು ಇವರುಗಳ ಸಹಾಯದಿಂದ ಮೃತ ಶರೀರವನ್ನು ಎತ್ತಿ ಆಂಬುಲೆನ್ಸ್ ಮುಖಾಂತರ ಮುಲ್ಕಿ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಯಿತು.
ಆತ್ಮಹತ್ಯೆಗೆ ಹಣಕಾಸಿನ ಸಮಸ್ಯೆ ಎಂದು ತಿಳಿದು ಬಂದಿದ್ದು ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.