ಡೈಲಿ ವಾರ್ತೆ:08 ಆಗಸ್ಟ್ 2023

ಬಿಎಂಟಿಸಿ ಡಿಪೋ ಮ್ಯಾನೇಜರ್ ಕಚೇರಿ ಎದುರೇ ಚಾಲಕ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಬಿಎಂಟಿಸಿ ಬಸ್ (BMTC BUS) ಡಿಪೋದಲ್ಲಿ ಮ್ಯಾನೇಜರ್ ಕಚೇರಿ ಎದುರೇ ಚಾಲಕ ಕಂ ನಿರ್ವಾಹಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ.

ಆವತಿ ಗ್ರಾಮದ ನಾಗೇಶ್ (45) ಆತ್ಮಹತ್ಯೆಗೆ ಶರಣಾದ ನೌಕರ. ಕಳೆದ ರಾತ್ರಿ ಡಿಪೋಗೆ ಆಗಮಿಸಿದ ನಾಗೇಶ್ ಮ್ಯಾನೇಜರ್ ಕಚೇರಿ ಎದುರೇ ನೇಣಿಗೆ ಶರಣಾಗಿದ್ದಾರೆ. ಬೆಳಿಗ್ಗೆ ಸಿಬ್ಬಂದಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ನಾಗೇಶ್ ಕೆಲಸಕ್ಕೆ ಪದೇ ಪದೇ ರಜೆ ಹಾಕುತ್ತಿದ್ದ ಎನ್ನಲಾಗಿದ್ದು, ಈ ಕಾರಣಕ್ಕೆ ಕಳೆದ 15 ದಿನಗಳಿಂದ ಕೆಲಸಕ್ಕೆ ಹಾಜರಾದರೂ ನಾಗೇಶ್‌ಗೆ ಕೆಲಸ ಕೊಟ್ಟಿರಲಿಲ್ಲ. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಾಗೇಶ್ ಸಹೋದ್ಯೋಗಿಗಳು ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.