ಡೈಲಿ ವಾರ್ತೆ:08 ಆಗಸ್ಟ್ 2023

ಪ್ರಕಾಶ್ ರಾಜ್‌ ಸಂವಾದದ ಬಳಿಕ‌ ಗೋಮೂತ್ರ ಹಾಕಿ ಕಾಲೇಜಿನ ಕೊಠಡಿ ಸ್ವಚ್ಛಗೊಳಿಸಿದ ವಿದ್ಯಾರ್ಥಿಗಳು

ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯ ಸರ್.ಎಂ.ವಿಶ್ವೇಶ್ವರಯ್ಯ ಕಲಾ-ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ಬೆಳಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್‌ ಅವರ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂವಾದದ ನಂತರ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಸಂವಾದ ನಡೆದ ಕಾಲೇಜಿನ ಕೊಠಡಿಗೆ ಗೋಮೂತ್ರ ಹಾಕಿ ಸ್ವಚ್ಛಗೊಳಿಸಿದ ನಾಟಕೀಯ ಬೆಳವಣಿಗೆ ನಡೆದಿದೆ.

ನಟ ಪ್ರಕಾಶ್ ರಾಜ್‌ ಕಾರ್ಯಕ್ರಮಕ್ಕೆ ಕಾಲೇಜಿನ ಕೆಲವು ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದರು. ಸಂವಾದದ ವೇಳೆ ತುಕ್ಡೆ ಗ್ಯಾಂಗಿನ ನಾಯಕ ಪ್ರಕಾಶ್ ರೈ ಎಂಬ ಘೋಷಣೆ ‌ಕೂಗಿದ್ದಾರೆ.

ಜೊತೆಗೆ ಕಾಲೇಜು ಎದುರೇ ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳಿಗೆ ತಾಲೂಕು ಬಿಜೆಪಿ ಅಧ್ಯಕ್ಷ ಧರ್ಮಪ್ರಸಾದ್ ಸಾಥ್ ಕೊಟ್ಟಿದ್ದಾರೆ. ಜೊತೆಗೆ ಪ್ರಕಾಶ್ ರಾಜ್‌ ಸಂವಾದದಿಂದ ವಿದ್ಯಾರ್ಥಿಗಳು ಕಲಿಯುವುದು ಏನಿದೆ? ಎಂದು ಪ್ರಶ್ನೆ ಮಾಡಿದ್ದರು.

ಇದೀಗ ಸಂವಾದ ಕಾರ್ಯಕ್ರಮ ಮುಗಿದ ನಂತರ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕೊಠಡಿಯನ್ನ ಗೋಮೂತ್ರ ಹಾಕಿ ಶುದ್ದೀಕರಿಸಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.