ಡೈಲಿ ವಾರ್ತೆ:13 ಆಗಸ್ಟ್ 2023

ಕಾರು-ಲಾರಿ ನಡುವೆ ಭೀಕರ ಅಪಘಾತ – ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತ್ಯು

ಚಿತ್ರದುರ್ಗ:ಜಿಲ್ಲೆಯ ಮಲ್ಲಾಪುರ ಗ್ರಾಮದ ಮೇಲ್ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, 8 ವರ್ಷದ ಮಗು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ವಿಜಯಪುರ ನಿವಾಸಿಗಳಾದ ಭೀಮಾಶಂಕರ (26), ಕಾರು ಚಾಲಕ ಸಂಗನ ಬಸಪ್ಪ (36), ರೇಖಾ (29), ಅಗಸ್ತ್ಯ (8) ಮೃತರು ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಸಂಗನ ಬಸಪ್ಪ ಅವರ ಮಕ್ಕಳಾದ ಅನ್ವಿತಾ(6), ಆದರ್ಶ(4)ಹಾಗೂ ಸುಮಾರು 26 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಗಾಯಗೊಂಡಿದ್ದು, ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಲ್ಲರೂ ವಿಜಯಪುರ ನಿವಾಸಿಗಳಾಗಿದ್ದು, ಸಂಗಣ್ಣ ಬಸಪ್ಪ ಮತ್ತು ಅವರ ಸಂಬಂಧಿ ಈರಣ್ಣ ಅವರ ಕುಟುಂಬದವರು ಪ್ರವಾಸಕ್ಕಾಗಿ ಚಿಕ್ಕಮಗಳೂರಿಗೆ ತೆರಳುತ್ತಿದ್ದರು. ಮತ್ತೊಂದು ಕಾರಿನಲ್ಲಿ ಈರಣ್ಣನವರ ಕುಟುಂಬವಿತ್ತು.
ಘಟನಾ ಸ್ಥಳಕ್ಕೆ ಎಸ್ಪಿ ಕೆ. ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.