ಕುಮಟಾ: ಮಕ್ಕಳನ್ನು ಬಸ್‌ ನಿಲ್ದಾಣದಲ್ಲಿ ಬಿಟ್ಟು ಸಮುದ್ರಕ್ಕೆ ಹಾರಿ ಆತ್ಮಹತ್ಯೆಯ ನಾಟಕವಾಡಿದ್ದ ತಾಯಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾಳೆ. ಪತಿಯ ಮೇಲಿನ ಕೋಪದಿಂದ ಆತನಿಗೆ ಪಾಠ ಕಲಿಸಲು ಆತ್ಮಹತ್ಯೆಯ ನಾಟಕ ವಾಡಿದ್ದು ಬಯಲಾಗಿದೆ.

ವಾರದ ಹಿಂದೆ ತಾಲೂಕಿನ ಸಾಂತಗಲ್‌ ಗ್ರಾಮದ ನಿವೇದಿತಾ ನಾಗರಾಜ ಭಂಡಾರಿ ಎಂಬಾಕೆ ಮಕ್ಕಳನ್ನು ಬಸ್‌ ನಿಲ್ದಾಣದಲ್ಲಿ ಬಿಟ್ಟು ಹೆಡ್‌ಬಂದರ್‌ ಸಮುದ್ರದ ಬಳಿ ಸಮುದ್ರಕ್ಕೆ ಹಾರಿದಂತೆ ನಾಟಕವಾಡಿದ್ದಳು. ಈಕೆ ಗಂಡನ ಜತೆಗೆ ಜಗಳವಾಡಿಕೊಂಡಿದ್ದು, ಆತನಿಗೆ ತಕ್ಕ ಪಾಠ ಕಲಿಸಬೇಕೆಂಬ ಉದ್ದೇಶದಿಂದ ಸಮುದ್ರ ತೀರಕ್ಕೆ ಬಂದು ತಾನು ತಂದಿದ್ದ ಸ್ಕೂಟಿ, ಮಾಂಗಲ್ಯ, ಕಾಲುಂಗುರ, ಮೊಬೈಲ್‌ ಅನ್ನು ದಂಡೆಯ ಮೇಲಿಟ್ಟು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಂತೆ ವೇಲ್‌ ಅನ್ನು ಸಮುದ್ರಕ್ಕೆ ಎಸೆದಿದ್ದಾಳೆ.

ನಿಲ್ದಾಣದಲ್ಲಿ ಸಿಕ್ಕ ಮಕ್ಕಳು ಹಾಗೂ ಸಮುದ್ರದಲ್ಲಿ ವೇಲ್‌ ಬಿದ್ದು ತೇಲುತ್ತಿರುವುದನ್ನು ಕಂಡು ಇದೊಂದು ಆತ್ಮಹತ್ಯೆ ಎಂದು ಭಾವಿಸಲಾಗಿತ್ತು. ಅಲ್ಲದೇ ಈ ಕುರಿತು ಪೊಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದರು.

ಮಹಿಳೆ ಶವಕ್ಕಾಗಿ ಲೈಫ್‌ ಗಾರ್ಡ್‌ಗಳು, ಪೊಲೀಸರು ಸಮುದ್ರದಲ್ಲಿ ಜಾಲಾಡಿದ್ದರು. ಆದರೆ ಶವ ಮಾತ್ರ ಸಿಕ್ಕಿರಲಿಲ್ಲ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಪಿ.ಎಸ್‌.ಐ ನವೀನ್‌ ನೇತೃತ್ವದ ತಂಡಕ್ಕೆ ಅನುಮಾನ ಕಾಡಿತ್ತು. ಹೀಗಾಗಿ ಸಮುದ್ರ ಜಾಲಾಡುವ ಜೊತೆ ಬೇರೆ ರೀತಿಯಲ್ಲೂ ತನಿಖೆ ಕೈಗೊಳ್ಳಲಾಗಿತ್ತು.

ಅದೇ ದಿನ ಸಮುದ್ರ ತೀರದ ಬಳಿ ಆಟೋವೊಂದು ನಿಂತಿದ್ದನ್ನು ಪತ್ತೆ ಹಚ್ಚಿ ಆಟೋ ಚಾಲಕನ ಮೂಲಕ ಈಕೆ ಬೇರೆಡೆ ಅಡಗಿರುವ ಕುರಿತು ಮಾಹಿತಿ ಕಲೆಹಾಕಿ ದಾಗ ಆತ್ಮಹತ್ಯೆ ನಾಟಕ ಬಯಲಾಗಿದೆ.
ತಾನು ಗಂಡನ ಮೇಲಿನ ಕೋಪಕ್ಕೆ ಹೀಗೆ ಮಾಡಿದ್ದೇನೆ. ಪ್ರತಿ ದಿನ ಕುಡಿದು ನನ್ನೊಂದಿಗೆ ಜಗಳವಾಡುತಿದ್ದ. ಹೊಡೆಯುತ್ತಿದ್ದ ಹೀಗಾಗಿ ಆತನಿಗೆ ಬುದ್ದಿ ಕಲಿಸಲು ಹೀಗೆ ಮಾಡಿದ್ದಾಗಿ ವಿಚಾರಣೆ ವೇಳೆ ಮಹಿಳೆ ಒಪ್ಪಿಕೊಂಡಿದ್ದಾಳೆ. ಆತ್ಮಹತ್ಯೆ ನಾಟಕವಾಡಿ ಲೈಫ್‌ ಗಾರ್ಡ್‌ ಹಾಗೂ ಪೊಲೀಸರ ದಿಕ್ಕು ತಪ್ಪಿಸಿ ಸಮಯ ವ್ಯರ್ಥ ಮಾಡಿರುವ ಆರೋಪದಡಿ ಮಹಿಳೆ ಇನ್ನೂ ಪೋಲಿಸರ ವಶದಲ್ಲೇ ಇದ್ದು ವಿಚಾರಣೆ ಮುಂದುವರಿದಿದೆ.