ಡೈಲಿ ವಾರ್ತೆ: 27/Feb/2024

ನವ ಜೋಡಿಯ ದಾರುಣ ಅಂತ್ಯ: ಹೃದಯಾಘಾತಕ್ಕೆ ಪತಿ ಬಲಿ, ಆಘಾತದಿಂದ ಪತ್ನಿ ಆತ್ಮಹತ್ಯೆಗೆ ಶರಣು

ಗಾಜಿಯಾಬಾದ್: ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವ ಜೋಡಿಯೊಂದು ಕೆಲವೇ ಗಂಟೆಗಳ ಅಂತರದಲ್ಲಿ ಜೀವ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.

ಈ ನವ ವಿವಾಹಿತ ಜೋಡಿ ಮೃಗಾಲಯಕ್ಕೆ ಭೇಟಿ ನೀಡಿತ್ತು. 25 ವರ್ಷದ ಅಭಿಷೇಕ್ ಅಹ್ಲುವಾಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು. ಪತಿಯ ಸಾವಿನಿಂದ ಆಘಾತಕ್ಕೆ ಒಳಗಾದ ಪತ್ನಿ ಅಂಜಲಿ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಭಿಷೇಕ್ ಮತ್ತು ಅಂಜಲಿ ನವೆಂಬರ್ 30ರಂದು ಸಾಂಸಾರಿಕ ಜೀವನಕ್ಕೆ ಕಾಲಿರಿಸಿದ್ದರು. ಸೋಮವಾರ ಅವರಿಬ್ಬರೂ ದಿಲ್ಲಿ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅಭಿಷೇಕ್‌ಗೆ ಎದೆನೋವು ಕಾಣಿಸಿಕೊಂಡಿತ್ತು. ಸ್ನೇಹಿತರಿಗೆ ಕರೆ ಮಾಡಿದ ಅಂಜಲಿ, ಅವರ ನೆರವಿನಿಂದ ಗುರು ತೇಜ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಅಭಿಷೇಕ್ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಆದರೆ ಚಿಕಿತ್ಸೆ ಫಲಿಸದೆ ಅಭಿಷೇಕ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಅವರ ಸಾವಿಗೆ ಹೃದಯಾಘಾತ ಕಾರಣ ಎಂದು ಗುರುತಿಸಲಾಗಿತ್ತು. ಗಾಜಿಯಾಬಾದ್‌ನ ವೈಶಾಲಿಯಲ್ಲಿರುವ ಅಹ್ಲಕೋನ್ ಅಪಾರ್ಟ್‌ಮೆಂಟ್‌ನ ಮನೆಗೆ ರಾತ್ರಿ ಸುಮಾರು 9 ಗಂಟೆಗೆ ಮೃತದೇಹ ತರಲಾಗಿತ್ತು. ಗಂಡನ ಅಕಾಲಿನ ಮರಣದಿಂದ ಆಘಾತಕ್ಕೆ ಒಳಗಾಗಿದ್ದ ಅಂಜಲಿ, ಏಳನೇ ಮಹಡಿಯಲ್ಲಿರುವ ತಮ್ಮ ಮನೆಯ ಬಾಲ್ಕನಿಗೆ ಓಡಿ ಹೋಗಿ ಅಲ್ಲಿಂದ ಜಿಗಿದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಂಜಲಿಯನ್ನು ವೈಶಾಲಿಯ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.