ಡೈಲಿ ವಾರ್ತೆ: 09/Mar/2024

ಮುಡಿಪು: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ- ಪಾದಚಾರಿ ಸಾವು!

ಮಂಗಳೂರು: ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ಮುಡಿಪು ಜಂಕ್ಷನ್‌ನಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ ಈ ಘಟನೆ ನಡೆದಿದೆ.

ಬಂಟ್ವಾಳ ಕರೋಪಾಡಿ ನಿವಾಸಿ ಸಿದ್ದಿಖ್‌ (48) ಎಂಬುವವರೇ ಮೃತರು. ಇವರು ಎರಡು ತಿಂಗಳ ಹಿಂದಷ್ಟೇ ಗಲ್ಫ್‌ ರಾಷ್ಟ್ರದ ಉದ್ಯೋಗದಿಂದ ಊರಿಗೆ ಬಂದಿದ್ದರು ಎನ್ನಲಾಗಿದೆ. ಇವರು ದೇರಳಕಟ್ಟೆ ಫ್ಲ್ಯಾಟ್‌ನಲ್ಲಿ ನೆಲೆಸಿದ್ದು, ಜುಮಾ ನಮಾಝ್‌ ಅನ್ನು ಕರೋಪಾಡಿ ಮಸೀದಿಯಲ್ಲಿ ನಡೆಸಿದ್ದರು. ವಾಪಸ್ಸು ಬರುವ ಸಂದರ್ಭದಲ್ಲಿ ದೇರಳಕಟ್ಟೆಗೆ ಬರುವ ದಾರಿಮಧ್ಯೆ ಮುಡಿಪು ಜಂಕ್ಷನ್‌ ನಲ್ಲಿ ಇಳಿದು, ಎಟಿಎಂ ಹಣ ಡ್ರಾ ಮಾಡಿ, ಅಲ್ಲಿಂದ ವಾಪಸ್ಸು ರಸ್ತೆ ದಾಟಿ ಬಸ್ಸನ್ನೇರಲೆಂದು ಹೊರಟಾದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಸೂರಜ್‌ನಾಥ್‌ ಎಂಬುವವರು ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.

ಪರಿಣಾಮ ತಲೆಭಾಗಕ್ಕೆ ಗಂಭೀರ ಗಾಯಗೊಂಡಿದ್ದ ಸಿದ್ದಿಖ್‌ ಅವರನ್ನೆ ನಾಟೆಕಲ್‌ ಕಣಚೂರು ಆಸ್ಪತ್ರೆಗೆ ದಾಖಲಿಸುವ ಮಧ್ಯೆ ಸಾವಿಗೀಡಾಗಿದ್ದಾರೆ. ಇವರು ತಂದೆ, ತಾಯಿ, ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಈ ಘಟನೆ ಕುರಿತು ದಕ್ಷಿಣ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.