ಡೈಲಿ ವಾರ್ತೆ: 18/Mar/2024

ಯುವಕನ ಕಿಡ್ನಾಪ್- 2 ಕೋಟಿ ಬೇಡಿಕೆ, ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಆರೋಪಿಗಳ ಬಂಧನ!

ದಾಂಡೇಲಿ : ಯುವಕನನ್ನು ಕಿಡ್ನಾಪ್ ಮಾಡಿ ಅವರ ಕುಟುಂಬಕ್ಕೆ 2 ಕೋಟಿ ರೂ. ಹಣದ ಬೇಡಿಕೆ ಇಟ್ಟಿದ್ದ ಅಪಹರಣಕಾರರನ್ನು ದಾಂಡೇಲಿ ನಗರ ಠಾಣೆಯ ಪೊಲೀಸರು ಮತ್ತು ಭಟ್ಕಳ ಪೊಲೀಸರು ಕೃತ್ಯ ನಡೆಸಿದ 18 ಗಂಟೆಯೊಳಗೆ ಭಟ್ಕಳದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ಭಾನುವಾರ ನಡೆದಿದೆ.

ಬಂಧಿತ ಆರೋಪಿಗಳು ದಾಂಡೇಲಿಯ ವನಶ್ರೀನಗರದ ಪರಶುರಾಮ ಯಲ್ಲಪ್ಪ ಮೇದಾರ (42), ಶಿರಸಿಯ ಶಾಂತಿನಗರದ ವಿನಾಯಕ ಕೆಂಪಣ್ಣ ಕರ್ನಿಂಗ್ (42), ಭಟ್ಕಳದ ಮದಿನಾ ಕಾಲೋನಿ ನಿವಾಸಿ ಅಬ್ದುಲ್ ಹುನ್ನಾನ ಮೊಹಮ್ಮದ ಜಾಫರ್(32), ದಾಂಡೇಲಿಯ ಗಾಂಧಿನಗರದ ಕಾಲಗೊಂಡ ತುಕಾರಾಮ ಸುರನಾಯ್ಕ(38) ಎನ್ನುವವರಾಗಿದ್ದಾರೆ.

ಗರದ ವನಶ್ರೀನಗರದ ನಿವಾಸಿ ಭರತ್ ಸುರೇಶ ಗಾಯಕವಾಡ(27) ಅವರಿಗೆ ಶನಿವಾರ ಮಧ್ಯಾಹ್ನ ಕರೆ ಮಾಡಿದ ಆರೋಪಿತರು, ಮಂಗಳೂರಿಗೆ ಬಾಡಿಗೆ ಹೋಗುವುದಿದೆ ಎಂದು ಚೆನ್ನಮ್ಮ ವೃತ್ತಕ್ಕೆ ಕರೆಯಿಸಿಕೊಂಡು ಅಪಹರಿಸಿದ್ದಾರೆ. ಅನಂತರ ಅವರ ಮೇಲೆ ಹಲ್ಲೆಯನ್ನು ಮಾಡಿದ್ದಾರೆ. ಕೊನೆಗೆ ಅವರ ಕುಟುಂಬಸ್ಥರಿಗೆ ಕರೆ ಮಾಡಿ ರೂ: 2 ಕೋಟಿ ಹಣ ನೀಡದಿದ್ದರೆ ಭರತ್ ಗಾಯಕವಾಡ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಅವರು ಅಪಹರಣಕಾರರ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು. ದಾಂಡೇಲಿ ಸಿಪಿಐ ಭೀಮಣ್ಣ ಸೂರಿ ನೇತೃತ್ವದಲ್ಲಿ ಪಿ.ಎಸ್.ಐ ಗಳಾದ ರವೀಂದ್ರ ಬಿರಾದಾರ, ಐ.ಆರ್. ಗಡ್ಡೇಕರ ಮತ್ತು ದಾಂಡೇಲಿ ನಗರ ಠಾಣೆಯ ಎಎಸ್ಐಗಳು, ಸಿಬ್ಬಂದಿಗಳು ಹಾಗೂ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರುಗಳಾದ ಚಂದನಗೋಪಾಲ, ಮಯೂರ ಪಟ್ಟಣಶೆಟ್ಟಿ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಜಿಲಾ ಕೇಂದ್ರದ ಸಿ.ಡಿ.ಆರ್ ವಿಭಾಗದ ಉದಯ ಗುನಗಾ, ರಮೇಶ ನಾಯ್ಕ ರವರನ್ನೊಳಗೊಂಡ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ 2 ಕಾರು, 5 ಮೊಬೈಲ್ ಮತ್ತು 35 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.