ಡೈಲಿ ವಾರ್ತೆ: 11/April/2024

ಚುನಾವಣೆ ಖರ್ಚಿಗೆಂದು ಗೃಹಲಕ್ಷ್ಮಿಯಿಂದ ಬಂದ ಹಣವನ್ನು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ನೀಡಿ ಶುಭ ಹಾರೈಸಿದ ಮಹಿಳೆ

ಚಿಕ್ಕಮಗಳೂರು: ಕಾಂಗ್ರೆಸ್ ಗ್ಯಾರಂಟಿಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯೊಬ್ಬರು ಚುನಾವಣೆಯ ಖರ್ಚಿಗೆಂದು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರಿಗೆ ನೀಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಮನೆ ಯಜಮಾನಿಗೆ ಪ್ರತಿ ತಿಂಗಳು ನೀಡುವ 2,000 ರೂ. ಹಣವನ್ನು ಮಹಿಳೆಯೊಬ್ಬರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರಿಗೆ ನೀಡಿದ್ದಾರೆ.

ಚಿಕ್ಕಮಗಳೂರು ನಗರದ 10ನೇ ವಾರ್ಡಿನಲ್ಲಿ ಪ್ರಚಾರಕ್ಕೆ ಬಂದ ವೇಳೆ ಪುಷ್ಪಾವತಿ ಎಂಬ ಮಹಿಳೆ 2,000 ರೂ. ಹಣವನ್ನು ಚುನಾವಣೆ ಖರ್ಚಿಗೆ ಬಳಸಿಕೊಳ್ಳಿ ಎಂದು ಜಯಪ್ರಕಾಶ್ ಹೆಗ್ಡೆ ಅವರಿಗೆ ದೇಣಿಗೆ ನೀಡಿದ್ದಾರೆ.

ಸರ್ಕಾರ ನಮಗೆ ಗ್ಯಾರಂಟಿ ನೀಡಿದೆ. ಗ್ಯಾರಂಟಿಯಿಂದ ಅನುಕೂಲವಾಗಿದೆ. ಈ ಹಣವನ್ನು ನಿಮ್ಮ ಚುನಾವಣಾ ಖರ್ಚಿಗೆ ಬಳಸಿಕೊಂಡು ಗೆಲುವು ಸಾಧಿಸಿ ಇನ್ನಷ್ಟು ಉತ್ತಮ ಕೆಲಸ ಮಾಡಿ ಎಂದು ಮಹಿಳೆ ಜಯಪ್ರಕಾಶ್ ಹೆಗ್ಡೆ ಅವರಿಗೆ ಶುಭ ಹಾರೈಸಿದ್ದಾರೆ.