ಡೈಲಿ ವಾರ್ತೆ: 01/ಜೂ./2024

ಮನೆಯ ಮೇಲ್ಛಾವಣಿ ಕುಸಿದು ಅಕ್ಕ, ತಮ್ಮ ಮೃತ್ಯು!

ಬಾಗಲಕೋಟೆ: ಮಣ್ಣಿನ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಅಕ್ಕ, ತಮ್ಮ ಸಾವನ್ನಪ್ಪಿದ ಘಟನೆ ಇಳಕಲ್ ತಾಲೂಕಿನ ಕಂದಗಲ್‌ನಲ್ಲಿ ನಡೆದಿದೆ.

ಗೀತಾ ಈಶ್ವರಯ್ಯ ಆದಾಪುರಮಠ (14) ಹಾಗೂ ಆಕೆಯ ಸಹೋದರ ರುದ್ರಯ್ಯ (10) ಮೃತಪಟ್ಟರೆ ಮನೆಯಲ್ಲಿದ್ದ ಅಜ್ಜಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಬೆಳಗ್ಗೆ ತಂದೆ, ತಾಯಿ ಕೆಲಸಕ್ಕೆ ಹೋದಾಗ ಮನೆಯಲ್ಲಿ ಗೀತಾ, ರುದ್ರಯ್ಯ ಮತ್ತು ಅಜ್ಜಿ ಇದ್ದರು. ಮೇಲ್ಛಾವಣಿ ಬೀಳುವ ಕೆಲವೇ ಕ್ಷಣದ ಮೊದಲು ಅಜ್ಜಿ ಮನೆಯಿಂದ ಹೊರಗಡೆ ಬಂದಿದ್ದರು.
ಮನೆಯಲ್ಲಿ ಮೊಬೈಲ್ ನೋಡುತ್ತಾ ಕುಳಿತಿದ್ದ ಗೀತಾ ಮತ್ತು ರುದ್ರಯ್ಯ ಅವರ ಮೇಲೆ ಅಪಾರ ಮಣ್ಣು, ಕಟ್ಟಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರ್ಯಾಚರಣೆ ನಡೆಸಿ ಮಣ್ಣಲ್ಲಿ ಸಿಲುಕಿದ್ದ ಇಬ್ಬರ ಶವವನ್ನು ಸ್ಥಳೀಯರು ಹೊರ ತೆಗೆದಿದ್ದಾರೆ.

ತಂದೆ ಬೆಳಗ್ಗೆ ಕೆಲಸಕ್ಕೆ ಹೋಗಿದ್ದರೆ, ತಾಯಿ ಹೊಲಕ್ಕೆ ಹೋಗಿದ್ದರು. ಈ ವೇಳೆ  ಶಾಲೆಗೆ ಹೋಗಿ ಎಂದು ಪೋಷಕರು ಮಕ್ಕಳಿಗೆ ಸೂಚಿಸಿದ್ದರು. ಪೋಷಕರ ಮಾತನ್ನು ನಿರ್ಲಕ್ಷಿಸಿದ ಮಕ್ಕಳು ಇಂದು ಮೊದಲ ದಿನ ಅಂತ ಶಾಲೆಗೆ ಹೋಗದೇ ಮನೆಯಲ್ಲೇ ಇದ್ದರು. ಆಸ್ಪತ್ರೆ ಆವರಣದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.