ಡೈಲಿ ವಾರ್ತೆ: 15/ಜೂ./2024

ಬೈಕ್ ಗೆ ಈಚರ್ ವಾಹನ ಡಿಕ್ಕಿ – ಸವಾರ ಮೃತ್ಯು

ಗುಂಡ್ಲುಪೇಟೆ: ಈಚರ್ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನೋರ್ವ ಸಾವನ್ನಪ್ಪಿರುವ ಘಟನೆ ತಾಲೂಕಿನ ತೊಂಡವಾಡಿ ಗೇಟ್ ಸಮೀಪದಲ್ಲಿ ಶನಿವಾರ ನಡೆದಿದೆ.ಬೇಗೂರಿನ ಬಾರ್ ವೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಚನ್ನಪಟ್ಟಣ ತಾಲೂಕಿನ ಮಳೂರು ಗ್ರಾಮದ ಅರುಣ್ ಕುಮಾರ್(25) ಮೃತ ದುರ್ದೈವಿ.ಮೈಸೂರಿನಿಂದ ತರಕಾರಿ ತುಂಬಿಕೊಂಡು ಬರುತ್ತಿದ್ದ ಈಚರ್ ವಾಹನ ಎದುರಿಗೆ ಬಂದ ಬೈಕ್ ಗೆ ಡಿಕ್ಕಿ ಹೊಡೆದಿದೆ ಎ‌ನ್ನಲಾಗುತ್ತಿದೆ.ಘಟನೆಯಲ್ಲಿ ಬೈಕ್ ಸವಾರನ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಪರಿಣಾಮ ಆ್ಯಂಬುಲೆನ್ಸ್ ಮೂಲಕ ಬೇಗೂರು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ಬಳಿಕ ಈಚರ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ಬೇಗೂರು ಪೊಲೀಸರು ಎರಡು ವಾಹನವನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.