ಡೈಲಿ ವಾರ್ತೆ: 18/ಜೂ./2024

ವಿದ್ಯುತ್ ತಂತಿ ತುಂಡಾಗಿ ಕೆರೆಗೆ ಬಿದ್ದು ಮೀನು ಹಿಡಿಯಲು ಹೋದ ಇಬ್ಬರು ಬಾಲಕರು ಮೃತ್ಯು!

ವಿಜಯಪುರ: ವಿದ್ಯುತ್ ತಂತಿ ತುಂಡಾಗಿ ಕೆರೆಯಲ್ಲಿ ಬಿದ್ದಿದ್ದರಿಂದ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಬಾಲಕರು ಮೃತಪಟ್ಟ ಘಟನೆ ವಿಜಯಪುರ ತಾಲೂಕಿನಲ್ಲಿ ಜರುಗಿದೆ.

ದುರಂತದಲ್ಲಿ ಮಡಿದ ದುರ್ದೈವಿ ಬಾಲಕರನ್ನು ದ್ಯಾಬೇರಿ ಗ್ರಾಮದ ರೋಹಿತ ಅನೀಲ ಚವ್ಹಾಣ(8) ಹಾಗೂ ವಿಜಯ ಚವ್ಹಾಣ(16) ಎಂದು ಗುರುತಿಸಲಾಗಿದೆ.

ಬಾಲಕರು ಮೀನು ಹಿಡಿಯಲು ಹೋಗಿದ್ದ ಕರೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ನೀರಿಗೆ ಇಳಿದಾಗ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ವಿಜಯಪುರ ತಾಲೂಕಿನ ದ್ಯಾಬೇರಿ ಗ್ರಾಮದ ಕೆರೆಯಲ್ಲಿ ಈ ದುರಂತ ಸಂಭವಿಸಿದ್ದು ವಿಷಯ ತಿಳಿಯುತ್ತಲೇ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಮೃತದೇಹಗಳನ್ನು ಹೊರಗೆ ತೆಗದು ಶವ ಪರೀಕ್ಷೆಗೆ ಸಾಗಿಸಲು ಮುಂದಾಗಿದ್ದು, ಮೃತ ಬಾಲಕ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.