ಡೈಲಿ ವಾರ್ತೆ: 19/ಜೂ./2024

ಮುಲ್ಲಾಮಾರಿ ಜಲಾಶಯಕ್ಕೆ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಮೃತ್ಯು!

ಬೀದರ್: ಈಜಲು ಹೋಗಿದ್ದ ಬಾಲಕ ಮುಲ್ಲಾಮಾರಿ ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಖೇರ್ಡಾ ಬಿ ಗ್ರಾಮದಲ್ಲಿ ನಡೆದಿದೆ.

ಮೃತ ದುರ್ದೈವಿ ಬಾಲಕ ಮುಜಾಬೀಲ್ ಕಾಜೋದ್ದಿನ್ (15) ಎಂದು ಗುರುತಿಸಲಾಗಿದೆ.

ಬಾಲಕ ಬಸವಕಲ್ಯಾಣ ತಾಲೂಕಿನ ಸಸ್ತಾಪೂರ್ ಗ್ರಾಮದ ನಿವಾಸಿಯಾಗಿದ್ದಾನೆ. ಆತನ ತಾಯಿ ತನ್ನ ಊರು ತಡೋಳ ಗ್ರಾಮಕ್ಕೆ ಹೋದ ಸಂದರ್ಭ ಐವರು ಗೆಳೆಯರ ಜೊತೆ ಈಜಲು ಹೋದಾಗ ಬಾಲಕ ಈಜಲು ಬಾರದೆ ಮುಲ್ಲಾಮಾರಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಜಲಾಶಯದಿಂದ ಬಾಲಕನ ಮೃತದೇಹ ಹೊರ ತೆಗೆದಿದ್ದಾರೆ. ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.