ಡೈಲಿ ವಾರ್ತೆ: 22/ಜೂ./2024

ಕುಮಟಾ ಶಾಸಕನ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಪೋಟ: ಓರ್ವ ಮಹಿಳೆಗೆ ಗಾಯ

ಉತ್ತರ ಕನ್ನಡ: ಕುಮಟಾ ಶಾಸಕ ದಿನಕರ ಶೆಟ್ಟಿ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಫೋಟ ವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದ ಕೊಪ್ಪಳಕರವಾಡಿ ವಾರ್ಡ್​ನಲ್ಲಿ ನಡೆದಿದೆ. ಶಾಸಕ ದಿನಕರ ಶೆಟ್ಟಿ ಸಹೋದರ ಮಧುಕರ ಶೆಟ್ಟಿ ಅವರಿಗೆ ಸಂಬಂಧಿಸಿದ ಮನೆ ಇದಾಗಿದ್ದು, ಮನೆಯಿಂದ ಹೊರಗೆ ಹೋದ ವೇಳೆ ಗ್ಯಾಸ್ ಸಿಲಿಂಡರ್ ಲೀಕ್ ಆಗಿತ್ತು. ಬಳಿಕ ಮನೆಗೆ ಬಂದು ಬಾಗಿಲು ತೆರೆಯುತ್ತಿದ್ದಂತೆ ಸಿಲಿಂಡರ್ ಸ್ಪೋಟಗೊಂಡಿದೆ.

ಇತ್ತ ಸಿಲಿಂಡರ್ ಸ್ಪೋಟಕ್ಕೆ ಮಧುಕರ ಶೆಟ್ಟಿ ಪತ್ನಿ ಲತಾ ಶೆಟ್ಟಿ ಬೆಚ್ಚಿಬಿದ್ದಿದ್ದಾರೆ. ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಬಚಾವ್​ ಆಗಿದ್ದಾರೆ. ಇನ್ನು ಸ್ಪೋಟದ ಭಯಾನಕ ಶಬ್ಧಕ್ಕೆ ಸ್ಥಳೀಯರು ಕಂಗಾಲಾಗಿದ್ದಾರೆ. ಘಟನೆಯಿಂದ ಮನೆಯ ಒಳಭಾಗ ಹೊತ್ತಿ ಉರಿದಿದ್ದು, ಮನೆಯಲ್ಲಿದ್ದ ಪೀಠೋಪಕರಣ, ಟಿ.ವಿ ಸೇರಿ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿ ಭಸ್ಮವಾಗಿದೆ. ಘಟನೆಯಲ್ಲಿ ಲತಾ ಶೆಟ್ಟಿ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಸ್ಥಳಕ್ಕೆ ಕುಮಟಾ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.