ಡೈಲಿ ವಾರ್ತೆ: 03/ಜುಲೈ /2024

ಕುಂದಾಪುರ: ಬಾಯ್ಸ್ ಅಸೋಸಿಯೇಷನ್ ಹಂಗಳೂರು ಇದರ ವತಿಯಿಂದ ರಕ್ತದಾನ ಶಿಬಿರ

ಕುಂದಾಪುರ: ಕುಂದಾಪುರ ತಾಲ್ಲೂಕಿನ ಬಾಯ್ಸ್ ಹಂಗಳೂರು ಇವರ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇದರ ಆಶ್ರಯದಡಿಯಲ್ಲಿ ರಕ್ತದಾನ ಶಿಬಿರವನ್ನು ಯುನಿಟಿ ಹಾಲ್ ಹಂಗಳೂರು ಇಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ಅಬೂಬಕ್ಕರ್ ಸಿದ್ದಿಕ್ ಸಖಾಫಿ ನೆರೆವೇರಿಸಿದರು. ಅವರು ಮಾತನಾಡಿ ರಕ್ತದಾನಕ್ಕೆ ಯಾವುದೇ ಜಾತಿ ಧರ್ಮ ಇಲ್ಲ ರಕ್ತದಾನ ಮಾನವೀಯತೆಯ ಸಂಕೇತವಾಗಿದೆ. ದಾನದಲ್ಲಿ ಶ್ರೇಷ್ಠದಾನ ರಕ್ತದಾನ, ರಕ್ತದಾನದಿಂದ ಒಂದು ಜೀವವನ್ನು ಉಳಿಸಬಹುದು. ರಕ್ತದಾನದಿಂದ ಅನೇಕ ದೈಹಿಕ ಪ್ರಯೋಜನಗಳಿವೆ ಎಂದು ಹೇಳಿದರು.

ಕುಂದಾಪುರ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷರಾದ ಎಸ್ ಜಯಕರ ಶೆಟ್ಟಿ ಮಾತನಾಡಿ ಬಾಯ್ಸ್ ಹಂಗಳೂರು ಎನ್ನುವ ತಂಡ ಈ ಭಾಗದಲ್ಲಿ ತನ್ನದೇ ಆದ ಸಮಾಜ ಸೇವೆಯನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದೆ. ಅಲ್ಲದೆ ಎಲ್ಲಾ ಜಾತಿ ಧರ್ಮದವರನ್ನು ಒಂದು ಗೂಡಿಸುವ ಈ ಬಾಯ್ಸ್ ಹಂಗಳೂರು ತಂಡ ಮುಂದೂ ಕೂಡ ಉತ್ತಮ ಸಮಾಜಮುಖಿ ಕಾರ್ಯಗಳನ್ನು ಮಾಡಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆನ್ನು ಬಾಯ್ಸ್ ಅಸೋಸಿಯೇಷನ್ ಹಂಗಳೂರು ಇದರ ಅಧ್ಯಕ್ಷ ಅಬ್ಬು ಹಂಗಳೂರು ವಹಿಸಿದ್ದರು. ಅವರು ಮಾತನಾಡಿ ನಮ್ಮ ಈ ಉಡುಪಿ ಜಿಲ್ಲೆ ಶಾಂತಿ ಹಾಗೂ ಸೌಹಾರ್ದತೆಗೆ ಮಾದರಿಯಾದಂತಹ ಜಿಲ್ಲೆ. ಇಲ್ಲಿ ನಾವೆಲ್ಲರೂ ಜಾತಿ, ಧರ್ಮವನ್ನು ಮರೆತು ಎಲ್ಲರೂ ಒಂದಾಗಿ ಬದುಕುತ್ತಿದ್ದೇವೆ.
ಇದಕ್ಕೆ ಉದಾಹರಣೆ ಇಂದು ನಡೆದ ಈ ರಕ್ತದಾನ ಶಿಬಿರದಲ್ಲಿ ಎಲ್ಲಾ ಧರ್ಮದವರು ಸೇರಿರುವುದು ಎಂದರು.
ಅಲ್ಲದೆ ಮುಂದಿನ ದಿನಗಳಲ್ಲಿ ನಾವು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಅದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಲಿ ಎಂದು ಹೇಳಿದರು.

ಈ ಕಾರ್ಯಕ್ರಮದ ಅತಿಥಿಗಳಾಗಿ ಯೂಸುಫ್ ಅಲ್ಸಾರ, ಗೌರವಾಧ್ಯಕ್ಷರು ಬಾಯ್ಸ್ ಹಂಗಳೂರು ಅಸೋಸಿಯೇಷನ್ ಕುಂದಾಪುರ, ಬಾಬು ಕಲಂದರ್ ಅಧ್ಯಕ್ಷರು ಜುಮ್ಮಾ ಮಸ್ಜಿದ್,ಹಂಗಳೂರು, ಸತೀಶ್ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಹಂಗ್ಳೂರು , ಆರ್ ಟಿ ಎನ್ ಬಶೀರ್ ಪ್ಲೆಸೆಂಟ್ ರೆಡ್ ಕ್ರಾಸ್ ಸದಸ್ಯರು ಕುಂದಾಪುರ, ಅಬ್ದುಲ್ ಶಾಹಿದ್ ಕಾರ್ಯದರ್ಶಿಗಳು ಹಂಗಳೂರು , ಹೆಚ್ಎಂ ಮುಸ್ತಫ ಖಜಾಂಚಿ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.