ಡೈಲಿ ವಾರ್ತೆ: 22/ಜುಲೈ /2024

ಸುಣ್ಣಾರಿ ಎಕ್ಸಲೆಂಟ್ ಪಿಯು ಕಾಲೇಜಿನಲ್ಲಿ ಗುರುವಂದನ ಕಾರ್ಯಕ್ರಮ

ಕುಂದಾಪುರ: ಗುರುಪೂರ್ಣಿಮೆಯ ಅಂಗವಾಗಿ ಕೋಟೇಶ್ವರ ಸಮೀಪದ ಸುಣ್ಣಾರಿಯ ಎಕ್ಸಲೆಂಟ್ ಪಿ ಯು ಕಾಲೇಜಿನಲ್ಲಿ ಭಾನುವಾರ ಗುರುವಂದನ ಕಾರ್ಯಕ್ರಮ ನಡೆಯಿತು.

ಭಂಡಾರ್ಕಾರ್ಸ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಮತ್ತು ಕನ್ನಡ ವಿಭಾಗ ಮುಖ್ಯಸ್ಥೆಯಾಗಿ ನಿವೃತ್ತಿಗೊಂಡ ಶ್ರೀಮತಿ ರೇಖಾ ವಿ. ಬನ್ನಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ, ಗುರು ಶಿಷ್ಯ ಪರಂಪರೆಯ ಬಗ್ಗೆ ಉತ್ಕೃಷ್ಟವಾದ ಸಂಸ್ಕೃತಿಯನ್ನು ಹೊಂದಿರುವಂತ ಈ ನಮ್ಮ ನಾಡು ಪವಿತ್ರ ನೆಲವಾಗಿದೆ.
ಜೀವನದಲ್ಲಿ ಗುರಿ, ಛಲ, ಗುರವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದರು.
ಹಿಂದೆ ಗುರು ಶಿಷ್ಯರ ಸಂಬಂಧ ಹೇಗಿತ್ತು, ಇವತ್ತು ಲೋಕದ ನಡೆ ಹೇಗಿದೆ ಎಂಬುದರ ಬಗ್ಗೆ ಉದಾಹರಣೆಗಳ ಮೂಲಕ ಅನುಭವದ ಮಾತುಗಳನ್ನು ಅವರು ಹಂಚಿಕೊಂಡರು.

ಈ ಸಂದರ್ಭದಲ್ಲಿ ಶ್ರೀಮತಿ ರೇಖಾ ವಿ. ಬನ್ನಾಡಿಯವರನ್ನು ಶಾಲಾ ಆಡಳಿತ ಮಂಡಳಿಯವರು, ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು ಸೇರಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಂ. ಎಂ. ಹೆಗ್ಡೆ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಎಕ್ಸಲೆಂಟ್ ಪಿ ಯು ಕಾಲೇಜ್ ಅಧ್ಯಕ್ಷರಾಗಿರುವ ಎಂ. ಮಹೇಶ್ ಹೆಗ್ಡೆ ಮಾತನಾಡಿ ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಗುರು ಹಿರಿಯರ ಬಗ್ಗೆ ತಂದೆ, ತಾಯಿಯ ಬಗ್ಗೆ ಗೌರವದ ಭಾವನೆ ಕಡಿಮೆಯಾಗುತ್ತಿದೆ.
ಮಕ್ಕಳು ಗುರು ಹಿರಿಯರಲ್ಲಿ ಗೌರವದ ಭಾವನೆ ಹೊಂದಿದ್ದರೆ ಮಾತ್ರ ಅವರ ಬದುಕು ಯಶಸ್ಸಿನತ್ತ ಸಾಗಿ ಸಾರ್ಥಕವಾಗುತ್ತದೆ.
ಆದ್ದರಿಂದ ವಿದ್ಯಾರ್ಥಿಗಳಲ್ಲಿ ವಿನಂತಿ ನೀವು ಒಳ್ಳೆಯ ಮಕ್ಕಳಾಗಿ ಉನ್ನತ ಶಿಕ್ಷಣ ಪಡೆದು ಮುಂದೆ ನಿಮ್ಮ ತಂದೆ ತಾಯಿಗೆ, ಗುರುಗಳಿಗೆ ನಮ್ಮ ಶಾಲೆಗೆ ಹಾಗೂ ದೇಶಕ್ಕೆ ಕೀರ್ತಿ ತನ್ನಿ ಎಂದು ಹಾರೈಸಿ ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳನ್ನು ಹೇಳಿದರು.

ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ, ಮುಖ್ಯ ಶಿಕ್ಷಕಿ ಸರೋಜಿನಿ ಹಾಗೂ ಅಧ್ಯಾಪಕವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿಕ್ಷಕಿ ಶಿಲ್ಪಾ ರಾಣಿ ಸ್ವಾಗತಿಸಿದರು.
ಶಿಕ್ಷಕ ಸಂದೀಪ್ ರವರು ಕಾರ್ಯಕ್ರಮವನ್ನು ನಿರೂಪಿಸಿ,
ಪೃಥ್ವಿ ಮೇಡಂ ವಂದಿಸಿದರು.