ಡೈಲಿ ವಾರ್ತೆ: 22/ಜುಲೈ /2024

ಗೀಸರ್ ನಿಂದ ಅನಿಲ ಸೋರಿಕೆಯಿಂದ ಮೃತಪಟ್ಟ ತಾಯಿ – ಮಗ

ರಾಮನಗರ: ಬಿಸಿ ನೀರು ಕಾಯಿಸುವ ಗ್ಯಾಸ್ ಗೀಸರ್ ನ ವಿಷಕಾರಿ ಕಾರ್ಬನ್ ಮೊನಾಕ್ಸೈಡ್ ಸೋರಿಕೆಯಿಂದಾಗಿ ತಾಯಿ ಮತ್ತು ಮಗ ಮೃತಪಟ್ಟ ಘಟನೆ ಭಾನುವಾರ ಮಾಗಡಿ ಪಟ್ಟಣದ ಜ್ಯೋತಿನಗರದಲ್ಲಿ ನಡೆದಿದೆ.

ಮೃತರನ್ನು ಶೋಭಾ (40) ಮತ್ತು ಅವರ ಪುತ್ರ ದಿಲೀಪ್ (17) ಎಂದು ಗುರುತಿಸಲಾಗಿದೆ.

ರಾತ್ರಿ ಏಳು ಗಂಟೆ ಸುಮಾರಿಗೆ ದಿಲೀಪ್ ಸ್ನಾನದ ಕೊಠಡಿಯಲ್ಲಿರುವ ಗೀಸರ್ ಸ್ವಿಚ್ ಆನ್ ಮಾಡಿಕೊಂಡು ಸ್ನಾನಕ್ಕೆ ತೆರಳಿದ್ದರು. ಆಗ, ಕಿಟಕಿ ಇಲ್ಲದ ಕೊಠಡಿಯನ್ನು ಆವರಿಸಿದ ಕಾರ್ಬನ್ ಮೊನಾಕ್ಸೈಡ್ ನಿಂದಾಗಿ ದಿಲೀಪ್ ಪ್ರಜ್ಞೆ ತಪ್ಪಿ ಮೃತಪಟ್ಟಿದ್ದಾರೆ.
ಸ್ನಾನಕ್ಕೆ ಹೋದ ಮಗ ಎಷ್ಟೊತ್ತಾದರೂ ಬರಲಿಲ್ಲವಲ್ಲ ಎಂದು ತಾಯಿ ಶೋಭಾ ಅವರು, ಸ್ನಾನದ ಕೊಠಡಿ ಬಾಗಿಲು ತೆರೆದು ಒಳ ಹೋದಾಗ ಮಗ ಕೆಳಗೆ ಬಿದ್ದಿರುವುದನ್ನು‌ ಗಮನಿಸಿದ್ದಾರೆ. ಆತನ ಸ್ಥಿತಿ ಕಂಡು ಗಾಬರಿಗೊಂಡು ಅವರ, ಮಗನನ್ನು ಹೊರಕ್ಕೆ ಕರೆತರಲು ಯತ್ನಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಅವರು ಸಹ ಅನಿಲ ಸೇವಿಸಿ ಪ್ರಜ್ಞೆ ತಪ್ಪಿ ಕೊನೆಯುಸಿರೆಳೆದಿದ್ದಾರೆ.