ಡೈಲಿ ವಾರ್ತೆ: 11/ಆಗಸ್ಟ್/2024

ಕಂಟೈನರ್‌ ಲಾರಿ ಮಗುಚಿ ಬಿದ್ದು ಕಾರು ಅಪ್ಪಚ್ಚಿ – ಐದು ಮಂದಿ ಪ್ರಯಾಣಿಕರ ಜೀವ ಉಳಿಸಿದ ವಾಂತಿ.!

ಉಪ್ಪಿನಂಗಡಿ: ಕಂಟೈನರ್‌ ಲಾರಿಯೊಂದು ಮಗುಚಿ ಬಿದ್ದು ಕಾರು ಅಪ್ಪಚ್ಚಿಯಾಗಿ ಅದೃಷ್ಟವಶಾತ್ ಪ್ರಯಾಣಿಕರು ವಾಂತಿ ಸಮಸ್ಯೆ ಯಿಂದ ಪಾರಾದ ಘಟನೆ ಶನಿವಾರ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಬರ್ಚಿನಹಳ್ಳದಲ್ಲಿ ನಡೆದಿದೆ.

ದಾವಣಗೆರೆಯ ನಿವಾಸಿಗರಾದ ಗಣೇಶ, ಶಿವು, ಕಾವ್ಯಾ, ದಂಡ್ಯಮ್ಮ ಅವರು ಚಾಲಕ ಅಬ್ದುಲ್‌ ರಹಿಮಾನ್‌ ಮುಲ್ಲಾ ಅವರೊಂದಿಗೆ ಶುಕ್ರವಾರ ಧರ್ಮಸ್ಥಳ ಕ್ಷೇತ್ರಕ್ಕೆ ಬಂದವರು ಶನಿವಾರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಸಂದರ್ಶನ ಮಾಡಿ ಊರಿಗೆ ಹಿಂದಿರುಗುವ ವೇಳೆ 11.30ಕ್ಕೆ ಬರ್ಚಿನಹಳ್ಳದಲ್ಲಿ ಅಪಘಾತ ಸಂಭವಿಸಿದೆ.

ಕಾರಿನಲ್ಲಿದ್ದ ಕಾವ್ಯಾ ಎಂಬವರಿಗೆ ವಾಂತಿ ಬರುತ್ತಿದೆ ಎಂದು ತಿಳಿಸಿದ ಕಾರಣಕ್ಕೆ ಹೆದ್ದಾರಿ ಬದಿಯಲ್ಲಿ ಕಾರನ್ನು ನಿಲ್ಲಿಸಿ ಕಾವ್ಯಾಳನ್ನು ಉಪಚರಿಸಲು ಎಲ್ಲರೂ ಇಳಿದಿದ್ದರು. ಚಾಲಕ ಮೂತ್ರ ವಿಸರ್ಜನೆಗೆ ಹೋಗಿದ್ದರು. ಈ ವೇಳೆ ಎಲ್ಲರ ಕಣ್ಣೆದುರೇ ಅವರ ಕಾರಿನ ಮೇಲೆ ಕಂಟೈನರ್‌ ಲಾರಿ ಮಗುಚಿ ಬಿದ್ದು ಕಾರು ಅಪ್ಪಚ್ಚಿಯಾಗಿದೆ.
ಮಹಿಳೆಯೊಬ್ಬರಿಗೆ ವಾಂತಿ ಬಂದ ಕಾರಣ ಎಲ್ಲರೂ ಕೆಳಗಿಳಿದಿದ್ದರು. ಆದ್ದರಿಂದಲೇ ಇವರೆಲ್ಲರೂ ಜೀವ ಉಳಿಸಿಕೊಂಡರು.