


ಡೈಲಿ ವಾರ್ತೆ: 20/ಆಗಸ್ಟ್/2024


ಉದಯಪುರದಲ್ಲಿ ಚಾಕು ಇರಿತದಿಂದ ಗಾಯಗೊಂಡಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಸಾವು
ಉದಯಪುರ: ರಾಜಸ್ಥಾನದ ಉದಯಪುರದಲ್ಲಿ ಶುಕ್ರವಾರ ಹೋಮ್ವರ್ಕ್ ವಿವಾದದ ನಂತರ ತನ್ನ ಸಹಪಾಠಿಯಿಂದ ಇರಿತಕ್ಕೊಳಗಾದ 15 ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾನೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿ ಹಿಂದೂ ಬಾಲಕ ದೇವರಾಜ್ ಎಂಬಾತನ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದರಿಂದ ಈ ಗಲಾಟೆ ಉದಯಪುರದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಕೋಮು ಘರ್ಷಣೆಗೆ ಕಾರಣವಾಗಿತ್ತು.
ಬಾಲಕನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಮತ್ತು ಇತರ ವಿಧಿವಿಧಾನಗಳನ್ನು ಮಾಡಲಾಗುತ್ತದೆ ಎಂದು ಉದಯಪುರ ಎಸ್ಪಿ ಯೋಗೇಶ್ ಗೋಯಲ್ ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ರಾಜಸ್ಥಾನದ ಗೃಹ ಸಚಿವ ಜವಾಹರ್ ಸಿಂಗ್ ಬೇಧಮ್ ಮಾಹಿತಿ ನೀಡಿದ್ದು, ನಮ್ಮ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಅಪ್ರಾಪ್ತ ವಯಸ್ಕ ಸಾವನ್ನಪ್ಪಿದ್ದಾನೆ. ಇದು ರಕ್ಷಾ ಬಂಧನದ ಸಂದರ್ಭದಲ್ಲಿ ನಡೆದ ದುರಂತ ಘಟನೆಯಾಗಿದೆ. ಸಂತ್ರಸ್ತನ ಕುಟುಂಬಕ್ಕೆ ನನ್ನ ಸಂತಾಪ. ಸರ್ಕಾರವು ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದು ಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಸರ್ಕಾರಿ ಶಾಲೆಯೊಳಗೆ ಹೋಂ ವರ್ಕ್ ವಿಚಾರಕ್ಕೆ ಇಬ್ಬರು ಮಕ್ಕಳ ನಡುವೆ ಜಗಳ ಉಂಟಾಗಿ ವಿದ್ಯಾರ್ಥಿಯೊಬ್ಬ ತನ್ನ ಬ್ಯಾಗ್ನಲ್ಲಿದ್ದ ಚಾಕುವಿನಿಂದ ದೇವರಾಜ್ ಎಂಬ 15 ವರ್ಷದ ಬಾಲಕನಿಗೆ ಇರಿದಿದ್ದ. ಇದು ಕೋಮುಗಲಭೆಗೆ ಕಾರಣವಾಗಿತ್ತು. ಇದಾದ ನಂತರ ರಾಜಸ್ಥಾನ ಸರ್ಕಾರ ಶಾಲೆಗಳಿಗೆ ಚಾಕು, ಕತ್ತರಿ ಮುಂತಾದ ಆಯುಧಗಳನ್ನು ತರುವುದನ್ನು ನಿಷೇಧಿಸಿತ್ತು.