ಡೈಲಿ ವಾರ್ತೆ: 20/ಆಗಸ್ಟ್/2024

ಮೂಡಿಗೆರೆ: ಗೃಹಿಣಿ ಆತ್ಮಹತ್ಯೆ- ವರದಕ್ಷಿಣೆ ಕಿರುಕುಳ ಆರೋಪ, ಪತಿ, ಅತ್ತೆ, ಮಾವ ಪೊಲೀಸ್ ವಶಕ್ಕೆ

ಮೂಡುಗೆರೆ: ಪತಿಯ ಕುಟುಂಬಸ್ಥರಿಂದ ಎದುರಾದ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಂದುವಳ್ಳಿ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಮಹಿಳೆ ಸುಭೀಕ್ಷಾ(25) ಎಂದು ಗುರುತಿಸಲಾಗಿದೆ.

ಸುಭೀಕ್ಷಾ 4 ವರ್ಷಗಳ ಹಿಂದೆ ಚಂದುವಳ್ಳಿಯ ಪ್ರವೀಣ್ ಜೊತೆ ವಿವಾಹವಾಗಿದ್ದರು. ಇವರಿಗೆ ಎರಡೂವರೆ ವರ್ಷದ ಒಂದು ಗಂಡು ಮಗು ಇದೆ. ಪತಿಯು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಅಂತೆಯೇ ಸೋಮವಾರ ಸಂಜೆ 4 ಗಂಟೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದುವೆಯಾಗಿ 7 ವರ್ಷದ ಒಳಗೆ ಗೃಹಿಣಿ ಆತ್ಮಹತ್ಯೆಗೆ ಶರಣಾದರೆ ತಹಸೀಲ್ದಾರ್ ರಿಂದ ಸ್ಪಾಟ್ ಮಹಜರ್ ಮಾಡಬೇಕಾಗುತ್ತದೆ. ಹೀಗಾಗಿ ಮಂಗಳವಾರದ ತನಕ ಸ್ಪಾಟ್ ಮಹಜರ್ ಮಾಡಿಲ್ಲ.
ಸುಭೀಕ್ಷಾ ಅವರ ಕುಟುಂಬಸ್ಥರು ವರದಕ್ಷಿಣೆ ಕಿರುಕುಳದಿಂದ ತಮ್ಮ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.