ಡೈಲಿ ವಾರ್ತೆ: 20/ಆಗಸ್ಟ್/2024

ಪುತ್ತೂರು: ಲವ್ ಪ್ರಪೋಸ್ ನಿರಾಕರಿಸಿದ್ದಕ್ಕೆ ಅನ್ಯಕೋಮಿನ ವಿದ್ಯಾರ್ಥಿನಿಗೆ ಅಪ್ರಾಪ್ತನಿಂದ ಚಾಕು ಇರಿತ!

ದಕ್ಷಿಣಕನ್ನಡ: ಪ್ರೇಮ ನಿವೇದನೆ ನಿರಾಕರಣೆ ಹಿನ್ನೆಲೆ ಅನ್ಯಕೋಮಿನ ಅಪ್ರಾಪ್ತೆ ವಿದ್ಯಾರ್ಥಿನಿ ಕೈಗೆ ಅದೇ ಕಾಲೇಜಿನ ವಿದ್ಯಾರ್ಥಿಯೋರ್ವ ಚಾಕುವಿನಿಂದ ಇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ನಡೆದಿದೆ.

ಹಿಂದೂ ವಿದ್ಯಾರ್ಥಿ ಚಾಕುವಿನಿಂದ ವಿದ್ಯಾರ್ಥಿನಿಯ ಕೈಗೆ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಸದ್ಯ ಆರೋಪಿ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಕೂಡ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿನಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬುಕ್‌ಸ್ಟಾಲ್‌ನಿಂದ ವಾಪಸ್ ಆಗುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು ಬಂದ ವಿದ್ಯಾರ್ಥಿ, ನಿನ್ನನ್ನು ಪ್ರೀತಿಸುವುದಾಗಿ ಹೇಳಿದ್ದಾನೆ. ಈ ವೇಳೆ ವಿದ್ಯಾರ್ಥಿನಿ ಅದನ್ನು ನಿರಾಕರಿಸಿದ್ದಾಳೆ. ಆಗ ಆತ ಕೈಗೆ ಚಾಕುವಿನಿಂದ ಇರಿದಿರುವುದಾಗಿ ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಇಷ್ಟು ಮಾತ್ರವಲ್ಲದೇ ಆಸ್ಪತ್ರೆಯಲ್ಲಿ ಹೆಸರು ಬದಲಾಯಿಸಿ ಹೇಳುವಂತೆ ಶಿಕ್ಷಕಿ ಒತ್ತಡ ಹೇರಿದ್ದರು. ಕೈಗೆ ಗಾಜು ತಾಗಿ ಗಾಯವಾಗಿದೆ ಎಂದು ಹೇಳಲು ಒತ್ತಾಯಿಸಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.

ಘಟನೆ ಹಿನ್ನೆಲೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸದ್ಯ ಆಸ್ಪತ್ರೆ ಬಳಿ ಜಮಾಯಿಸಿದ್ದ ಜನರನ್ನು ಪೋಲೀಸರು ಆಸ್ಪತ್ರೆಯಿಂದ ಹೊರಗೆ ಕಳುಹಿಸಿದ್ದಾರೆ. ಕೈಗೆ ಗಾಜು ತಾಗಿದೆ ಎಂದು ಕಾಲೇಜು ಪ್ರಾಂಶುಪಾಲರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುವುದಾಗಿ ಆರೋಪಿಸಲಾಗಿದೆ. ಈ ಕುರಿತು ಪುತ್ತೂರು ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.