ಡೈಲಿ ವಾರ್ತೆ: 25/ಆಗಸ್ಟ್/2024

ನಟ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ?: ಸಿಗರೇಟ್ ಹಿಡಿದು ನಾಲ್ವರ ಜೊತೆ ಹರಟೆ ಫೋಟೋ ವೈರಲ್

ಬೆಂಗಳೂರು: ಕೊಲೆ ಆರೋಪದಲ್ಲಿ ನಟ ದರ್ಶನ್​ ಜೈಲು ಸೇರಿದ್ದು, ಅಲ್ಲಿ ಅವರಿಗೆ ರಾಜಾತಿಥ್ಯ ಸಿಗುತ್ತಿದೆಯಾ ಎಂಬ ಅನುಮಾನ ಮೂಡಿದೆ. ಯಾಕೆಂದರೆ, ದರ್ಶನ್​ ಅವರ ಒಂದು ಫೋಟೋ ವೈರಲ್​ ಆಗಿದೆ. ಅದರಲ್ಲಿ ಅವರು ಸಿಗರೇಟು ಸೇದುತ್ತಾ, ಕಾಫಿ ಕುಡಿಯುತ್ತಿರುವ ದೃಶ್ಯ ಸೆರೆಯಾಗಿದೆ. ವೈರಲ್​ ಆಗಿರುವ ಫೋಟೋದಿಂದ ಅನೇಕ ಅನುಮಾನಗಳು ಮೂಡಲು ಆರಂಭಿಸಿವೆ. ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ಕೊಲೆ ಮಾಡಿಸಿದ ಆರೋಪ ದರ್ಶನ್​ ಮೇಲಿದೆ. ಹಾಗಾಗಿ ಅವರನ್ನು ಪರಪ್ಪನ ಅಗ್ರಹಾರದ ಸ್ಪೆಷಲ್​ ಬ್ಯಾರಕ್​ನಲ್ಲಿ ಇರಿಸಲಾಗಿದೆ. ಅಲ್ಲಿ ಅವರು ಆರಾಮಾಗಿ ದಿನ ಕಳೆಯುತ್ತಿರುವಂತಿದೆ.

ದರ್ಶನ್​ ಅವರು ಸ್ಪೆಷಲ್​ ಬ್ಯಾರಕ್​ನಿಂದ ಹೊರಬಂದು, ಮೂವರ ಜೊತೆ ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಕಾಫಿ ಮಗ್​ ಹಿಡಿದುಕೊಂಡು ಅವರು ಕುಳಿತಿದ್ದಾರೆ. ಕೈಯಲ್ಲಿ ಸಿಗರೇಟ್​ ಕೂಡ ಇದೆ. ಈ ಫೋಟೋ ವೈರಲ್​ ಆಗಿದೆ. ಇನ್ನೂ ಯಾವೆಲ್ಲ ಸೌಕರ್ಯಗಳನ್ನು ನಟನಿಗೆ ನೀಡಿರಹುದು ಎಂಬ ಪ್ರಶ್ನೆಯನ್ನು ಈ ಫೋಟೋ ಹುಟ್ಟುಹಾಕಿದೆ. ಜೈಲು ಅಧಿಕಾರಿಗಳ ನಡೆಯ ಬಗ್ಗೆ ಅನುಮಾನ ಮೂಡುವಂತಾಗಿದೆ.

ಇದು ಹೈ ಪ್ರೊಫೈಲ್​ ಕೇಸ್​ ಆದ ಕಾರಣ ಎಲ್ಲರ ಗಮನ ಇದರ ಮೇಲಿದೆ. ತನಿಖೆಯ ಪ್ರತಿ ಹಂತವೂ ಕೂಡ ಸುದ್ದಿ ಆಗುತ್ತಿದೆ. ದರ್ಶನ್​ ಹಾಗೂ ಗ್ಯಾಂಗ್​ ವಿರುದ್ಧ ಈಗಾಗಲೇ ಅನೇಕ ಬಗೆಯ ಸಾಕ್ಷಿಗಳು ಸಿಕ್ಕಿವೆ. ಇನ್ನೇನು ಕೆಲವೇ ದಿನಗಳಲ್ಲಿ ಪೊಲೀಸರು ಚಾರ್ಜ್​ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಈ ಹಂತದಲ್ಲಿ ದರ್ಶನ್​ ಅವರ ವೈರಲ್​ ಫೋಟೋ ಹರಿದಾಡಿದೆ.

ಜೈಲಿನಲ್ಲಿ ದರ್ಶನ್​ ತಲೆ ಬೋಳಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈ ಫೋಟೋ ನೋಡಿದ ಬಳಿಕ ಅದು ಖಚಿತವಾಗಿದೆ. ಅವರ ವಿಗ್​ ಕೂಡ ತೆಗೆಸಲಾಗಿದೆ. ಈಗಾಗಲೇ ಅನೇಕರು ಜೈಲಿಗೆ ಭೇಟಿ ನೀಡಿ ದರ್ಶನ್​ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಪೊಲೀಸರ ತನಿಖೆಯಲ್ಲಿ ಹೇಳಿಕೆ ನೀಡಿದ ಬಳಿಕ ನಟ ಚಿಕ್ಕಣ್ಣ ಕೂಡ ಜೈಲಿಗೆ ತೆರಳಿ ದರ್ಶನ್​ ಅವರನ್ನು ಮಾತನಾಡಿಸಿದ್ದರು. ಹಾಗಾಗಿ ಅವರಿಗೆ ಪೊಲೀಸರು ಮತ್ತೆ ನೋಟೀಸ್​ ನೀಡುವ ಸಾಧ್ಯತೆ ಇದೆ. ಕೇಸ್​ ತನಿಖೆ ಆರಂಭ ಆದಾಗ ದರ್ಶನ್​ ಅವರು ಎ2 ಆಗಿದ್ದರು. ಆದರೆ ಚಾರ್ಚ್​ಶೀಟ್​ ಸಲ್ಲಿಸುವ ಹಂತದಲ್ಲಿ ಅವರನ್ನು ಎ1 ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಕೂಡ ಕೇಳಿಬಂದಿದೆ.