ಡೈಲಿ ವಾರ್ತೆ: 28/ಆಗಸ್ಟ್/2024

ಚಿಕ್ಕಮಗಳೂರು: ಗನ್ ಸ್ವಚ್ಛಗೊಳಿಸುವಾಗ ಮಿಸ್ ಫೈರ್ – ವ್ಯಕ್ತಿ ಸಾವು

ಚಿಕ್ಕಮಗಳೂರು: ಮನೆಯ ಶೆಡ್‌ನಲ್ಲಿದ್ದ ಗನ್‌ ಸ್ವಚ್ಛಗೊಳಿಸುವಾಗ ನಡೆದ ಅವಘಡದಲ್ಲಿ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ಚಿಕ್ಕಮಗಳೂರು ತಾಲೂಕಿನ ಕಳವಾಸೆ ಗ್ರಾಮದಲ್ಲಿ ನಡೆದಿದೆ.

ಕಳವಾಸೆ ಗ್ರಾಮದ ಅರುಣ್ (47) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಕಳವಾಸೆಯ ಅರುಣ್ ಎನ್ನುವವರು ಗನ್‌ ಸ್ವಚ್ಛಗೊಳಿಸಲೆಂದು ಮನೆಯಿಂದ ಶೆಡ್‌ಗೆ ತೆರಳಿದ್ದಾರೆ. ಶೆಡ್‌ನಲ್ಲಿ ಹಳೆಯ ಗನ್ ತೆಗೆದು ಸ್ವಚ್ಛಗೊಳಿಸುವಾಗ ಏಕಾಏಕಿ ಫೈರ್‌ ಆಗಿದ್ದು, ಅರುಣ್ ಬಲಗಣ್ಣಿನ ಒಳಗೆ ನುಗ್ಗಿ ಗುಂಡು ಹೊರಬಂದಿದೆ. ಈ ದುರ್ಘಟನೆಯಲ್ಲಿ ಅರುಣ್ ಸ್ಥಳದಲ್ಲೇ ಮೃತಪಟ್ಟಿದ್ದು, ಘಟನಾ ಸ್ಥಳದಲ್ಲಿ ರಕ್ತದ ಕೋಡಿ ಹರಿದಿದೆ.
ಇನ್ನು ಮನೆಯಲ್ಲಿ ಯಾರೂ ಇಲ್ಲದಿರುವಾಗ ಶೆಡ್‌ನಲ್ಲಿ ಈ ದುರಂತ ನಡೆದಿದ್ದು, ಇದು ಆತ್ಮಹತ್ಯೆಯೋ ಅಥವಾ ನಿಜವಾಗಿ ಗನ್‌ ಮಿಸ್ ಫೈರ್ ಆಗಿ ಸಾವು ಸಂಭವಿಸಿದೆಯೋ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಅಸಲಿ ಕಾರಣ ತಿಳಿದು ಬರಬೇಕಿದೆ. ಘಟನೆ ಸಂಬಂಧ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.