ಡೈಲಿ ವಾರ್ತೆ: 29/ಆಗಸ್ಟ್/2024

ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕೊಂದ ಪತಿ.!

ಬೆಂಗಳೂರು: ಮೂರು ವರ್ಷಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಪತಿಯೇ ಚಿತ್ರಹಿಂಸೆ ಕೊಟ್ಟು ಕೊಂದಿರುವ ಘಟನೆ ಕೆಂಗೇರಿಯ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಡೆದಿದೆ.

ನವ್ಯಾ (25) ಕೊಲೆಯಾದ ಮಹಿಳೆ, ಕಿರಣ್ ಕೊಲೆ ಮಾಡಿದ ಪಾಪಿ ಪತಿ. ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ್ದಾನೆ. ಬುಧವಾರ (ಆ.28) ಮಧ್ಯಾಹ್ನ 1:30 ರಿಂದ 3 ಗಂಟೆ ಸಮಯದಲ್ಲಿ ಕೊಲೆ ನಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಭದ್ರಾವತಿ ಮೂಲದ ನವ್ಯಾ, ಚಿಕ್ಕಬಳ್ಳಾಪುರ ಮೂಲದ ಕಿರಣ್‌ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ನವ್ಯಾ ಸಿನಿಮಾ ರಂಗದಲ್ಲಿ ಕೊರಿಯೋಗ್ರಾಫರ್‌ ಆಗಿ ಕೆಲಸ ಮಾಡುತ್ತಿದ್ದರು. ಪತಿ ಕಿರಣ್‌ ಕ್ಯಾಬ್ ಚಾಲಕನಾಗಿದ್ದ.
ಇತ್ತೀಚೆಗೆ ಪತಿ ಕಿರಣ್‌, ನವ್ಯಾ ಜೊತೆಗೆ ಆಗಾಗ್ಗೆ ಜಗಳ ತೆಗೆಯುತ್ತಿದ್ದ, ಶೀಲ ಶಂಕಿಸಿ ಗಲಾಟೆ ಮಾಡ್ತಿದ್ದ. ಬುಧವಾರ ಮಧ್ಯಾಹ್ನದ ವೇಳೆ ಇದೇ ವಿಚಾರಕ್ಕೆ ಗಲಾಟೆ ಮಾಡಿರುವ ಕಿರಣ್‌, ನಂತರ ನವ್ಯಾಳನ್ನ ಕುರ್ಚಿಗೆ ಕಟ್ಟಿಹಾಕಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕೆಂಗೇರಿ ಪೊಲೀಸರು ಕೊಲೆ ಮಾಡಿ ಎಸ್ಕೇಪಾಗಿದ್ದ ಕಿರಣ್‌ನನ್ನ ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.