ಡೈಲಿ ವಾರ್ತೆ: 13/Sep/2024

KSRTC ನಿಯಂತ್ರಣಾಧಿಕಾರಿಗೆ ಚಾಕು ಇರಿದ ಸಾರಿಗೆ ಇಲಾಖೆ ನೌಕರ

ಚಿಕ್ಕಮಗಳೂರು: ವರ್ಗಾವಣೆ ಸಂಬಂಧ ಕುಟುಂಬಸ್ಥರನ್ನು ಕರೆಸಿ ಬುದ್ಧಿ ಹೇಳಿದ್ದಕ್ಕೆ ಕೋಪಗೊಂಡ ಸಾರಿಗೆ ಇಲಾಖೆ ನೌಕರನೊಬ್ಬ ಇಲಾಖೆಯ ಡಿಸಿಗೆ ಚಾಕು ಇರಿದ ಘಟನೆ ನಗರದ ಸರ್ಕಾರಿ ಬಸ್ (KSRTC) ನಿಲ್ದಾಣದಲ್ಲಿ ನಡೆದಿದೆ.

ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಕುಮಾರ್ ವಾಹನ ಹತ್ತುವ ವೇಳೆ ಅಡ್ಡಗಟ್ಟಿದ ಜ್ಯೂನಿಯರ್ ಅಸಿಸ್ಟೆಂಟ್ ರಿತೇಶ್ ಏಕಾಏಕಿ ಚಾಕುವಿನಿಂದ ಚುಚ್ಚಲು ಮುಂದಾಗಿದ್ದಾನೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಅಧಿಕಾರಿಯ ಕೈಗೆ ಗಾಯವಾಗಿದೆ.

ರಿತೇಶ್ ಹಾಜರಾತಿ ಸರಿ ಇಲ್ಲ ಎಂದು ಕುಟುಂಬದ ಸದಸ್ಯರನ್ನ ಕರೆಸಿ ಡಿಸಿ ಕೌನ್ಸಿಲಿಂಗ್ ಮಾಡಿದ್ದರು. ಕುಟುಂಬದವರ ಮನವಿ ಮೇರೆಗೆ ರಿತೇಶ್‍ನನ್ನು ಚಿಕ್ಕಮಗಳೂರಿನಿಂದ ಬೇಲೂರಿಗೆ ವರ್ಗಾವಣೆ ಕೂಡ ಮಾಡಲಾಗಿತ್ತು. ಇದರಿಂದ ತನಗೆ ಮನೆಯವರ ಎದುರು ಅವಮಾನ ಮಾಡಿದ್ದಾರೆ ಎಂದು ಆರೋಪಿ ಈ ಕೃತ್ಯ ಎಸಗಿದ್ದಾನೆ.

ಗಾಯಗೊಂಡ ಅಧಿಕಾರಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ರಿತೇಶ್ ಪರಾರಿಯಾಗಿದ್ದಾನೆ.

ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.