ಡೈಲಿ ವಾರ್ತೆ: 14/Sep/2024

ಭಕ್ತಿ ಮಾರ್ಗದಲ್ಲಿ ಆನಂದವಿದೆ, ಸರ್ವ ದುಃಖ ದುಮ್ಮಾನಗಳನ್ನು ಮರೆಸುತ್ತದೆ: ಲಕ್ಷ್ಮೀನಾರಾಯಣ ವೈದ್ಯ

ತೆಕ್ಕಟ್ಟೆ: ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರುತ್ತಿರುವುದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ. ದೇಗುಲದ ಸೋಣೆ ಆರತಿ ಸಂದರ್ಭ ಭಕ್ತಿ ಸುಧೆಯನ್ನು ಹರಿಸಿ ಮನಸ್ಸನ್ನು ಹಗುರಾಗಿಸಿ, ಭಕ್ತಿ ಮಾರ್ಗಕ್ಕೆ ಕೊಂಡೊಯ್ಯುವ ಪರಿಪಾಟ ಆರೋಗ್ಯಕರ ಲಕ್ಷಣ.
ಭಕ್ತಿ ಮಾರ್ಗವು ಮನಸ್ಸಿನ ತುಡಿತಗಳನ್ನು, ಜಂಜಾಟಗಳನ್ನು, ನೋವುಗಳನ್ನು ಮರೆಸುತ್ತದೆ. ಭಕ್ತಿ ಮಾರ್ಗದಲ್ಲಿ ಆನಂದವಿದೆ, ತನ್ಮಯತೆಯ ಭಕ್ತಿಯು ಸರ್ವವನ್ನೂ ಸಮತೋಲನದಲ್ಲಿರಿಸುತ್ತದೆ ಎಂದು ದ್ರಾವಿಡ ಭ್ರಾಹ್ಮಣ ಪರಿಷತ್‌ನ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ವೈದ್ಯ ದೀಪ ಬೆಳಗಿಸಿ ಉದ್ಘಾಟಿಸಿ ಮಾತನ್ನಾಡಿದರು.

ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ‘ಸಿನ್ಸ್ 1999 ಶ್ವೇತಯಾನ-58’ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿರುವ ಆರ್. ವಿ. ಮೆಲೋಡೀಸ್ ಕೋಟೇಶ್ವರ ತಂಡದ ಭಕ್ತಿ ರಸಮಂಜರಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 12 ರಂದು ಉದ್ಘಾಟಿಸಿ ವೈದ್ಯರು ಮಾತನ್ನಾಡಿದರು.
ಮಾಜಿ ಜಿಲ್ಲ ಪಂಚಾಯತ್ ಸದಸ್ಯರಾದ ಗಣಪತಿ ಟಿ. ಶ್ರೀಯಾನ್ ಮಾತನ್ನಾಡಿ, ಸಂಸ್ಥೆಯ 25ನೇ ವರ್ಷದ ಕಾರ್ಯಕ್ರಮದ ಉದ್ಘಾಟನೆ ಅವಿಸ್ಮರಣೀಯ. ವರ್ಷಕ್ಕೆ 108 ಕಾರ್ಯಕ್ರಮವನ್ನು ಆಯೋಜಿಸುವ ನಿಟ್ಟಿನಲ್ಲಿ ಹೊರಟ ಸಂಸ್ಥೆ 28 ಕಾರ್ಯಕ್ರಮ ಪೂರೈಸಿಕೊಂಡು ಸಮಾರೋಪಕ್ಕೆ ಅದ್ಧೂರಿಯ ಸಿದ್ಧತೆಯಲ್ಲಿ ತೆರೆದುಕೊಂಡಿದೆ. ಇಂತಹ ಸಂಸ್ಥೆಯನ್ನು ಕಲಾ ಪೋಷಕರು ಬೆಳೆಸಬೇಕು ಎಂದರು. ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಬೆಟ್ಟಿನ ಮನೆ ವಾದಿರಾಜ ಹತ್ವಾರ್, ಅಮೃತ್ ಕುಮಾರ್ ತೌಳ, ಗಾಯಕ ಜಗದೀಶ್ ಶಣೈ, ಗಾಯಕ ರಾಘವೇಂದ್ರ ಕೋಟೇಶ್ವರ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಬಳಿಕ ಆರ್. ವಿ. ಮೆಲೋಡೀಸ್ ಕೋಟೇಶ್ವರ ತಂಡದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ರಂಗದಲ್ಲಿ ಸಂಪನ್ನಗೊಂಡಿತು.