ಡೈಲಿ ವಾರ್ತೆ: 22/Sep/2024

ಪೋಕ್ಸೋ ಪ್ರಕರಣದಲ್ಲಿ ಪೋಲೀಸರು ಸುಳ್ಳು ಪ್ರಕರಣವೆಂದು ಸಲ್ಲಿಸಿದ ಬಿ ವರದಿಯನ್ನು ತಿರಸ್ಕರಿಸಿ ಪ್ರಕರಣಕ್ಕೆ ಮರುಜೀವ ನೀಡಿದ ಉಡುಪಿ ಜಿಲ್ಲಾ ಪೋಕ್ಸೋ ನ್ಯಾಯಾಲಯ

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಠಾಣಾ ವ್ಯಾಪ್ತಿಯ ನೊಂದ ಬಾಲಕನೊಬ್ಬ ಸ್ಥಳೀಯ ಮಸೀದಿಗೆ ನಮಾಜಿಗೆ ಹೋದ ಸಂದರ್ಭದಲ್ಲಿ ಆತನಿಗೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಆತನಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಆರೋಪಿಯಾದ ಫೈಝಲ್ ಬಾರಿ ಮತ್ತು ಆ ಬಗ್ಗೆ ಬೇರೆಯವರಿಗೆ ವಿಷಯ ತಿಳಿಸಿದಂತೆ ಕೊಲೆ ಬೆದರಿಕೆ ಹಾಕಿರುವ ಆರೋಪಿಗಳಾದ ಮಾವಡ ಅಖಿಲ್ ಮತ್ತು ಮೋಝ್’ಮ್ ಹುಸೇನ್ ರವರ ಮೇಲೆ ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದ್ದು ಅದರಂತೆ ಪ್ರಕರಣದ ಅಕ್ರ ಸಂಖ್ಯೆ 85/2022ರಂತೆ ದೂರು ದಾಖಲಿಸಿದ ಪೊಲೀಸರು ಪ್ರಕರಣವನ್ನು ವಿಚಾರಣೆ ನಡೆಸಿದ ತರುವಾಯ ಸುಳ್ಳು ಪ್ರಕರಣವೆಂದು ಉಡುಪಿ ಜಿಲ್ಲಾ ಪೋಕ್ಸೋ ನ್ಯಾಯಾಲಯಕ್ಕೆ ಬಿ ಅಂತಿಮ ವರದಿಯನ್ನು ಸಲ್ಲಿಸಿದ್ದರು.

ಸದ್ರಿ ವರದಿ ಆಧಾರದ ಮೇಲೆ ಪೊಲೀಸರ ಬಿ ವರದಿಯನ್ನು ಪ್ರಶ್ನಿಸಿ ನೊಂದ ಬಾಲಕ ನ್ಯಾಯಾಲಯಕ್ಕೆ ಹಾಜರಾಗಿ ವೈದ್ಯರು ಮತ್ತು ಇತರೆ ಸಾಕ್ಷಿಗಳನ್ನು ತನ್ನ ಪರವಾಗಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರುಪಡಿಸಿರುತ್ತಾನೆ.

ಸದ್ರಿ ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರು ಮೇಲ್ನೋಟಕ್ಕೆ ಪ್ರಕರಣ ನಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಪೊಲೀಸರ ಬಿ ವರದಿಯನ್ನು ತಿರಸ್ಕರಿಸಿ ಆರೋಪಿಗಳಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ನೀಡಿ ಆರೋಪಿಗಳ ಮೇಲೆ ಮರು ಪ್ರಕರಣ ದಾಖಲಿಸುವಂತೆ ಉಡುಪಿ ಜಿಲ್ಲಾ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣರವರು ಆದೇಶ ಮಾಡಿರುತ್ತಾರೆ.
ಈ ಪ್ರಕರಣದಲ್ಲಿ ಪಿರ್ಯಾದಿ ನೊಂದ ಬಾಲಕನ ಪರವಾಗಿ ಉಡುಪಿ ನ್ಯಾಯವಾದಿ ಚೇರ್ಕಾಡಿ ಅಖಿಲ್.ಬಿ.ಹೆಗಡೆ ವಾದ ಮಂಡಿಸಿದ್ದರು.