ಡೈಲಿ ವಾರ್ತೆ: 29/Sep/2024

ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ವಾರ್ಷಿಕ ಮಹಾಸಭೆ: ಬ್ರಾಹ್ಮಣರು ತಮ್ಮ ಸಂಸ್ಕಾರವನ್ನು ಉಳಿಸಿ ಕೊಳ್ಳಬೇಕು- ಡಾ. ಕೆ ಎಸ್ ಕಾರಂತ್

ಸಾಲಿಗ್ರಾಮ : ಬ್ರಾಹ್ಮಣರು ತಮ್ಮ ಸಂಸ್ಕಾರವನ್ನು ಉಳಿಸಿ ಕೊಳ್ಳಬೇಕು ಹಾಗೂ ತಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ತನ್ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಹಾಗೂ ಎಲ್ಲಾ ತ್ರಿಮತಸ್ಥ ಬ್ರಾಹ್ಮಣರು ಒಂದು ಗೂಡಿ ಸಂಘಟಿತರಾಗುವುದು ಅತೀ ಮುಖ್ಯವಾಗಿದೆ . ಈ ನಿಟ್ಟಿನಲ್ಲಿ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ಉತ್ತಮ ಕಾರ್ಯವೆಸಗುತ್ತಿದೆ ಎಂದು ಡಾ. ಕೆ ಎಸ್ ಕಾರಂತರು ಅಭಿಪ್ರಾಯಪಟ್ಟರು.
ಅವರು ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ವಾರ್ಷಿಕ ಮಹಾಸಭೆಯ ಅಧಿವೇಶನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಇನ್ನೋರ್ವ ಮುಖ್ಯ ಅತಿಥಿ ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀ ಕೆ ಅಶೋಕ ಭಟ್ಟರು ಪ್ರತಿ ಶತ ಮೂರರಷ್ಟಿರುವ ಬ್ರಾಹ್ಮಣ ಸಮುದಾಯ ಸಂಘಟಿತರಾಗದಿದ್ದರೆ ಮುಂದಿನ ದಿನಗಳಲ್ಲಿ ಸವಾಲುಗಳನ್ನು ಎದುರಿಸುವುದು ಕಷ್ಟವಾದೀತು ಎಂದು
ಕಳವಳ ವ್ಯಕ್ತಪಡಿಸಿದರು. ಹಾಗೂ ಸಾಲಿಗ್ರಾಮ ವಲಯದ ಸಮಾಜಮುಖಿ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಲಿಗ್ರಾಮ ವಲಯದ ಅಧ್ಯಕ್ಷ ಶ್ರೀ ಯಂ ಶಿವರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು.

ಸಾಲಿಗ್ರಾಮ ಬ್ರಾಹ್ಮಣ ಮಹಾಸಭಾದ ವ್ಯಾಪ್ತಿಯ ಸುಮಾರು 50 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಸುಮಾರು 2,50,000 ರೂ.ಗಳ ವಿದ್ಯಾರ್ಥಿ ವೇತನ ವಿತರಿಸಲಾಯಿತು. ವಲಯದ ಐದು ಮಂದಿ ಅನಾರೋಗ್ಯ ಪೀಡಿತರಿಗೆ ಸುಮಾರು 50 ಸಾವಿರ ರೂ. ವೈದ್ಯಕೀಯ ನೆರವು ನೀಡಲಾಯಿತು. ಉಡುಪಿ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಶ್ರೀ ಸಿ. ಕೃಷ್ಣಮೂರ್ತಿ ಉರಾಳ ಹಾಗೂ ಶಿಲ್ಪಕಲಾ ಶಾಸ್ತ್ರ ದಲ್ಲಿ ಡಾಕ್ಟರೇಟ್ ಪದವಿ ಗಳಿಸಿದ ಶ್ರೀ ಎಚ್ ಜಿ ಗಣೇಶ ಉರಾಳ ಇವರನ್ನು ಸನ್ಮಾನಿಸಲಾಯಿತು. ಕುಮಾರಿ ಶ್ರೀಪ್ರಿಯ ಪಿ. , ಶ್ರೀಲಕ್ಷ್ಮಿ ಸೋಮಯಾಜಿ, ಅಕ್ಷಯ ಶಾಸ್ತ್ರಿ, ವಿಭುವನ ಹೇಳೆ೯ , ಅದ್ವೈತ ಉಪಾಧ್ಯ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಗಿರಿಜಾ ಶಂಕರನಾರಾಯಣ ಮಧ್ಯಸ್ಥ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬ್ರಾಹ್ಮಣ ಮಹಾಸಭಾದ ಮುಖೇನ ವಲಯದ ಎಂಟು ಮಂದಿ ಅನಾರೋಗ್ಯ ಪೀಡಿತರಿಗೆ ಹಾಗೂ ಇಬ್ಬರು ವಿದ್ಯಾರ್ಥಿಗಳಿಗೆ ಒಟ್ಟು ಒಂದು ಲಕ್ಷ ರೂ.
ಧನ ಸಹಾಯ ವಿತರಿಸಲಾಯಿತು.
ಮಹಾಸಭೆಯ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಉಪಾಧ್ಯಕ್ಷ ಶ್ರೀ ಪಟ್ಟಾಭಿರಾಮ ಸೋಮಯಾಜಿ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀ ಕೆ. ರಾಜಾರಾಮ ಐತಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಶ್ರೀ ಸುಬ್ರಹ್ಮಣ್ಯ ಹೇಳೆ೯, ಶ್ರೀ ಸಿ.ಸುಬ್ರಾಯ ಉರಾಳ. ಶ್ರೀ ಪಿ. ಸಿ. ಹೊಳ್ಳ, ಶ್ರೀ ಕೃಷ್ಣ ಪ್ರಸಾದ ಹೇಳೆ೯, ಶ್ರೀ ಮಹಾಬಲ ಹೇಳೆ೯, ಶ್ರೀ ಲಕ್ಷ್ಮೀನಾರಾಯಣ ಅಡಿಗ, ವಿಪ್ರ ಮಹಿಳಾ ಬಳಗದ ಶ್ರೀಮತಿ ವನಿತಾ ಉಪಾಧ್ಯ ಸಹಕರಿಸಿದರು.
ಮುನ್ನೂರಕ್ಕೂ ಹೆಚ್ಚಿನ ಸಮಾಜ ಬಾಂಧವರು ಉಪಸ್ಥಿತರಿದ್ದರು.