ಡೈಲಿ ವಾರ್ತೆ: 05/OCT/2024

ಶ್ರೀರಂಗಪಟ್ಟಣ: ಬಿಳಿ ಕುದುರೆ ನೋಡಿ ಅಡ್ಡಾದಿಡ್ಡಿ ಓಡಾಡಿದ ದಸರಾ ಆನೆ – ಸ್ಥಳದಲ್ಲಿದ್ದ ಜನರು ದಿಕ್ಕಾಪಾಲು!

ಶ್ರೀರಂಗಪಟ್ಟಣ: ದಸರಾ ಮಹೋತ್ಸವದ ಅಂಬಾರಿ ಮೆರವಣಿಗೆಗೆ ಆಗಮಿಸಿರುವ ಹಿರಣ್ಯ ಎಂಬ ಆನೆ ಗುರುವಾರ ರಾತ್ರಿ ಹಾಗೂ ಶುಕ್ರವಾರ ಮಧ್ಯಾಹ್ನ ಲಕ್ಷ್ಮೀ ಆನೆ ಸಹ ಬೆಚ್ಚಿದ್ದು ಅಡ್ಡಾದಿಡ್ಡಿ ಓಡಾಡುವ ಮೂಲಕ ಆತಂಕ ಸೃಷ್ಟಿಸಿತು.

ಮಹೇಂದ್ರ (ಅಂಬಾರಿ ಹೊರಲಿರುವ ಆನೆ) ಹಿರಣ್ಯ ಹಾಗೂ ಲಕ್ಷ್ಮೀ ಗಜಪಡೆಗಳು ಗುರುವಾರ ಸಂಜೆ ಪಟ್ಟಣಕ್ಕೆ ಆಗಮಿಸಿದ್ದವು. ಈ ವೇಳೆ ಶ್ರೀರಂಗನಾಥಸ್ವಾಮಿ ದೇಗುಲದ ಬಳಿ ಪೂಜೆಗೆ ಕೆರದೊಯ್ಯತ್ತಿದ್ದ ವೇಳೆ ಇಲ್ಲಿನ ಬಿಳಿ ಕುದುರೆಯನ್ನು ನೋಡಿದ ಹಿರಣ್ಯ ಆನೆ ಬೆಚ್ಚಿ ಅಡ್ಡಾದಿಡ್ಡಿ ಓಡಾಡಿತ್ತು. ನಂತರ ಮಾವುತ ಆನೆಯನ್ನ ಸಮಾಧಾನಪಡಿಸಿದ್ದರು.

ಮತ್ತೆ ಶುಕ್ರವಾರ ಮಧ್ಯಾಹ್ನ ದಸರಾ ಉತ್ಸವ ಹಿನ್ನೆಲೆಯಲ್ಲಿ ಬನ್ನಿಮಂಟಪಕ್ಕೆ ಕರೆದೊಯ್ಯುವ ವೇಳೆ ಶ್ರೀರಂಗನಾಥ ದೇವಸ್ಥಾನದ ಮುಂಭಾಗ ಬೆಚ್ಚಿದ್ದು ಲಕ್ಷ್ಮೀ ಎಂಬ ಆನೆ ರಸ್ತೆಯಲ್ಲೆ ಅಡ್ಡಾದಿಡ್ಡಿ ಓಡಾಡಿದೆ. ಆನೆ ರಂಪಾಟಕ್ಕೆ ಸ್ಥಳದಲ್ಲಿದ್ದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಈ ವೇಳೆ ಮಾವುತರು, ಕಾವಾಡಿಗರ ಸಮಯ ಪ್ರಜ್ಞೆಯಿಂದ ಆನೆ ರಂಪಾಟವನ್ನು ಶಾಂತಗೊಳಿಸಿ, ಕಾಲಿಗೆ ಕಬ್ಬಿಣದ ಸರಪಳಿ ಹಾಕಿದರು.