ಡೈಲಿ ವಾರ್ತೆ: 12/OCT/2024

ನೆಲ್ಯಾಡಿ: ಕಂದಕಕ್ಕೆ ಉರುಳಿದ ಖಾಸಗಿ ಬಸ್ಸು – ಚಾಲಕ ಸ್ಥಳದಲ್ಲೇ ಮೃತ್ಯು

ನೆಲ್ಯಾಡಿ: ಖಾಸಗಿ ಬನ್ನೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಚಾಲಕ ಮೃತಪಟ್ಟ ಘಟನೆ ಶುಕ್ರವಾರ ತಡ ರಾತ್ರಿ ನೆಲ್ಯಾಡಿ ಸಮೀಪದ ಲಾವತ್ತಡ್ಕ ಎಂಬಲ್ಲಿ ನಡೆದಿದೆ.

ಶುಕ್ರವಾರ ತಡರಾತ್ರಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಬ್ರಹಣ್ಯ ನಾಮಫಲಕ ಹೊಂದಿದ ಈ ಖಾಸಗಿ ಸ್ಲಿಪರ್ ಬಸ್ಸು ಲಾವತ್ತಡ್ಕ ಬಳಿ ಕಂದಕಕಕ್ಕೆ ಉರುಳಿ ಗುಂಡ್ಯ ಹೊಳೆಗೆ ಬಿದ್ದಿದೆ.

ಅಪಘಾತದ ಸಂದರ್ಭ ಬಸ್ಸಿನಲ್ಲಿ ಚಾಲಕ ಹಾಗೂ ನಿರ್ವಾಹಕ ಮಾತ್ರವಿದ್ದರು. ಹೀಗಾಗಿ ಭಾರೀ ದುರಂತವೊಂದು ಸಂಭವಿಸುವುದು ತಪ್ಪಿದೆ.
ಈ ಘಟನೆಯಿಂದ ಚಾಲಕ ಭರತ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಚಾಲಕ ಬೆಂಗಳೂರು ಮೂಲದವರು, ಬಸ್ಸಿನ ಮಾಲಕರು ಕೂಡ ಬೆಂಗಳೂರಿನವರೆಂಬ ಪ್ರಾಥಮಿಕ ಮಾಹಿತಿ ಲಭಿಸಿದೆ.

ಮೂಲಗಳ ಪ್ರಕಾರ, ಈ ಖಾಸಗಿ ಬಸ್ ಗುರುವಾರ ಬೆಂಗಳೂರಿನಿಂದ ಹೊರಟ್ಟಿದ್ದು. ಶುಕ್ರವಾರ ಪ್ರಯಾಣಿಕರನ್ನು ಗೋಕರ್ಣದಲ್ಲಿ ಇಳಿಸಿದೆ. ಬಳಿಕ ಶುಕ್ರವಾರ ಸಂಜೆ ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯದತ್ತ ಹೊರಟಿತ್ತು. ಈ ವೇಳೆ ಬಸ್ಸಿನಲ್ಲಿ ಡ್ರೈವ‌ರ್ ಮತ್ತು ನಿರ್ವಾಹಕ ಮಾತ್ರ ಇದ್ದರು. ಮಾರ್ಗ ಮಧ್ಯೆ ಅದು ಅಪಘಾತಕ್ಕಿಡಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅದು ಬೆಂಗಳೂರಿಗೆ ತೆರಳಲಿರುವ ಪ್ರಯಾಣಿಕರನ್ನು ಪಿಕ್ ಅಪ್ ಮಾಡಲಿತ್ತು ಎನ್ನಲಾಗಿದೆ.