ಡೈಲಿ ವಾರ್ತೆ: 22/OCT/2024

ಸಾರಿಗೆ ಬಸ್ಸಿನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

ಕನಕಪುರ: ಗರ್ಭಿಣಿಯೊಬ್ಬರು ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ತಪಾಸಣೆಗೆ ತಾಲೂಕು ಆಸ್ಪತ್ರೆಗೆ ರಾಜ್ಯ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯೆದಲ್ಲಿ ಬಸ್ಸಿನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಬಸ್‌ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯನ್ನು ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ರಜಿಯಭಾನು ಎಂದು ಗುರುತಿಸಲಾಗಿದೆ.

ರಜಿಯಾಭಾನು 7 ತಿಂಗಳ ಗರ್ಭಿಣಿಯಾಗಿದ್ದು, ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈಕೆ ಹುಣಸನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಪಾಸಣೆಗೆ ಹೋಗಾದ ವೈದ್ಯರು ತಪಾಸಣೆ ನಡೆಸಿ ಅಲ್ಲಿಂದ ಹೊಸದುರ್ಗ ಸಮುದಾಯ ಆರೋಗ್ಯಕೇಂದ್ರಕ್ಕೆ ಹೋಗುವಂತೆ ತಿಳಿಸಿದ್ದಾರೆ.
ವೈದ್ಯರ ಶಿಪಾರಸ್ಸಿನಂತೆ ಹೊಸದುರ್ಗ ಸಮುದಾಯ ಆರೋಗ್ಯಕೇಂದ್ರಕ್ಕೆ ಬಂದ ಗರ್ಭಿಣಿಯನ್ನು ತಪಾಸಣೆ ಮಾಡಿದ ವೈದ್ಯರು ಕನಕಪುರ ತಾಲೂಕು ಹೆರಿಗೆ ಆಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ಹೋಗುವಂತೆ ತಿಳಿಸಿದ್ದಾರೆ. ಕನಕಪುರ ಹೆರಿಗೆ ಆಸ್ಪತ್ರೆಗೆ ಬಸ್‌ನಲ್ಲಿ ಬರುತ್ತಿದ್ದಾಗ ಮಾರ್ಗ ಮಧ್ಯೆ ಹೊಟ್ಟೆನೋವು ಹೆಚ್ಚಾಗಿ ಹೆರಿಗೆ ಆಗಿದೆ. ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಬಸ್‌ನಲ್ಲೇ ಅವಧಿ ಪೂರ್ವ ಹೆರಿಗೆ ಆಗಿದ್ದು, ಸಾರಿಗೆ ಸಂಸ್ಥೆ ಚಾಲಕ ಮತ್ತು ನಿರ್ವಾಹಕರು ಬಸ್‌ನ್ನು ನಗರದ ಹೆರಿಗೆ ಆಸ್ಪತ್ರೆಗೆ ಸಾಗಿಸಿದ್ದು, ಆಸ್ಪತ್ರೆ ಸಿಬ್ಬಂದಿ ತಕ್ಷಣ ಧಾವಿಸಿ ತಾಯಿ ಮಕ್ಕಳ ಆರೈಕೆ ಮಾಡಿದ್ದಾರೆ. ಏಳು ತಿಂಗಳಿಗೆ ಮಕ್ಕಳ ಜನನವಾಗಿದ್ದು, ತೂಕ ಕಡಿಮೆ ಇರುವುದರಿಂದ ಮಕ್ಕಳನ್ನು ಎನ್‌ಐಸಿಯುನಲ್ಲಿ ದಾಖಲಿಸಿ ಆರೈಕೆ ಮಾಡಬೇಕು. ತಾಲೂಕಿನಲ್ಲಿ ಅಂತಹ ವ್ಯವಸ್ಥೆ ಇಲ್ಲವಾಗಿದ್ದು, ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.