

ಡೈಲಿ ವಾರ್ತೆ:17/DEC/2024



ಕಾರ್ಕಳ: ಹೋಂ ನರ್ಸ್ನಿಂದ 9 ಲಕ್ಷ ರೂ. ವಂಚನೆ ಪ್ರಕರಣ – ಇಬ್ಬರು ಆರೋಪಿಗಳ ಬಂಧನ
ಕಾರ್ಕಳ: ಹೋಂ ನರ್ಸ್ ಆಗಿ ಮನೆ ಸೇರಿಕೊಂಡು ಮನೆ ಯಜಮಾನರ ಗೂಗಲ್ ಪೇ ಪಿನ್ ಕದ್ದು ನೋಡಿ 9 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಡಿ. 14ರಂದು ಮುಂಬಯಿ ದಹಿಸರ್ನಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಕುಕ್ಕುಂದೂರಿನ ಕುಪ್ಪಬೆಟ್ಟು ನಿವಾಸಿ ಕಾರ್ತಿಕ್ ಶೆಟ್ಟಿ (28) ಮತ್ತು ತೆಳ್ಳಾರು ನಿವಾಸಿ ರತ್ನಾಕರ್ (50) ಎಂದು ತಿಳಿದು ಬಂದಿದೆ.
ಆರೋಪಿಗಳು ಶಶಿಧರ್ (75) ಎಂಬುವವರಿಗೆ 9 ಲಕ್ಷ ರೂ ವಂಚನೆ ಮಾಡಿದ್ದಾರೆ. ಶಶಿಧರ್ ಅವರ ಕೋರಿಕೆಯ ಮೇರೆಗೆ ಅಲೈಟ್ಕೇರ್ ಎಂಬ ಸಂಸ್ಥೆಯ ಆರೋಪಿ ರತ್ನಾಕರ್ ನಿಂದ ಆರೋಪಿ ಕಾರ್ತಿಕ್ ಶೆಟ್ಟಿ ಹೋಂ ನರ್ಸ್ ಆಗಿ ಮನೆಗೆ ಕೆಲಸಕ್ಕೆ ನಿಯೋಜನೆಗೊಂಡಿದ್ದ.
ಈ ವೇಳೆ ಶಶಿಧರ್ ಅವರು ಬೇರೆಯವರಿಗೆ ಹಣ ವರ್ಗಾವಣೆ ಮಾಡುವ ವೇಳೆ ಆರೋಪಿಯು ಗೂಗಲ್ ಪೇ ಪಿನ್ ನಂಬರ್ ಗಮನಿಸಿದ್ದ. ಬಳಿಕ ಹಂತಹಂತವಾಗಿ ಲಕ್ಷಾಂತರ ರೂ. ಹಣವನ್ನು ಭಾರತ್ ಬ್ಯಾಂಕ್ ಕೋ-ಅಪರೇಟಿವ್ ಸೊಸೈಟಿ ಖಾತೆಗೆ ಗೂಗಲ್ ಪೇ ಮುಖಾಂತರ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತನಿಖೆ ಕೈಗೆತ್ತಿಕೊಂಡ ಕಾರ್ಕಳ ನಗರ ಠಾಣೆ ಪೊಲೀಸರು ಆರೋಪಿಗಳ ಪತ್ತೆ ಬಲೆ ಬೀಸಿದ್ದರು. ಆರೋಪಿಗಳು ಮುಂಬಯಿಯಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.