ಡೈಲಿ ವಾರ್ತೆ:22/DEC/2024

ಎಕ್ಸಲೆಂಟ್ ವಿದ್ಯಾಸಂಸ್ಥೆ ಬಗ್ಗೆ ಅಪಪ್ರಚಾರ- ಕಿವಿಗೊಡದಂತೆ ಪೋಷಕರಲ್ಲಿ ಮನವಿ

ಕುಂದಾಪುರ ಗ್ರಾಮೀಣ ಪ್ರದೇಶದಲ್ಲಿ ತನ್ನ ವಿಶೇಷತೆಗಳಿಂದಾಗಿ ಅತ್ಯಲ್ಪಾವಧಿಯಲ್ಲೇ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು, ವಿದ್ಯಾರ್ಥಿಗಳು ಹಾಗೂ ವಿದ್ಯಾಮಾನಿಗಳ ಮೆಚ್ಚುಗೆಗೆ ಪಾತ್ರವಾದ ಸುಣ್ಣಾರಿಯ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಬಗ್ಗೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ಅಪಪ್ರಚಾರ ಮಾಡುತ್ತಿರುವುದನ್ನು ಸಂಸ್ಥೆಯ ಆಡಳಿತ ಮಂಡಳಿಯು ಖಂಡಿಸಿದೆ.

ಈ ಬಗ್ಗೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆಡಳಿತ ಮಂಡಳಿಯ ಸದಸ್ಯರು ಅಪಪ್ರಚಾರವನ್ನು ಖಂಡಿಸುವುದರೊಂದಿಗೆ, ಸಂಸ್ಥೆಯ ಸಾಧನೆಗಳನ್ನು ಬಿಚ್ಚಿಟ್ಟು, ಅಪಪ್ರಚಾರಗಳು ಆಧಾರ ರಹಿತ ಎಂಬುದನ್ನು ವಿವರಿಸಿದರು.

ಆಡಳಿತ ಮಂಡಳಿಯ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ಮಾತನಾಡಿ, ಹನ್ನೆರಡು ವರ್ಷಗಳಿಂದ ಶಿಕ್ಷಣದಲ್ಲಿ ಹೊಸ ಅಲೆಯನ್ನು ಎಬ್ಬಿಸಿ ಪ್ರಗತಿಯ ದಾಪುಗಾಲನ್ನು ಇಟ್ಟು, ಈಡೀ ರಾಷ್ಟ್ರ ಹಾಗೂ ರಾಜ್ಯವೇ ಕುಂದಾಪುರದ ನಮ್ಮ ಸಂಸ್ಥೆಯತ್ತ ಗಮನ ಹರಿಸುವಷ್ಟು ಶೈಕ್ಷಣಿಕವಾಗಿ ಗುರುತಿಸಿಕೊಂಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಪಟ್ಟಭದ್ರಹಿತಾಸಕ್ತಿಗಳ ಊಹಾಪೋಹದ ಮಾತುಗಳು, ನಡವಳಿಕೆಯ ತಂತ್ರಗಳು ಹಾಗೂ ಸಂಸ್ಥೆಯ ಬಗೆಗೆ ಮಾಡುವ ಗೊಂದಲಗಳ ಸೃಷ್ಟಿಯು ಸಂಸ್ಥೆಯ ಗಮನಕ್ಕೆ ಬಂದಿದೆ. ಉಚ್ರಾಯ ಸ್ಥಿತಿಯಲ್ಲಿರುವ ಒಂದು ಶೈಕ್ಷಣಿಕ ಸಂಸ್ಥೆಗೆ ಈ ರೀತಿಯ ಅಪಪ್ರಚಾರಗಳು ಮಾರಕವಾಗುತ್ತವೆ.

ಸತತ ಹನ್ನೆರಡು ವರ್ಷದಿಂದ ಈ ಸಂಸ್ಥೆಯಲ್ಲಿ ಬೋಧನೆ ಹಾಗೂ ತರಬೇತಿ ನೀಡುತ್ತಾ ಬಂದಿರುವ ಅನುಭವಿ ಉಪನ್ಯಾಸಕರ ಜೊತೆಗೆ ನಮ್ಮ ರಾಜ್ಯ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳ ಪ್ರತಿಷ್ಠಿತ ಸಂಸ್ಥೆಗಳಿಂದ ಬಂದಿರುವ ಅನುಭವಿ ಹಾಗೂ ಪ್ರತಿಭಾನ್ವಿತ ಉಪನ್ಯಾಸಕರ ತಂಡವು ನಮ್ಮ ಸಂಸ್ಥೆಯಲ್ಲಿ ಬೋಧನೆಯನ್ನು ಮಾಡುತ್ತಾ ಬಂದಿದ್ದಾರೆ. ಈ ಅನುಭವಿ ಉಪನ್ಯಾಸಕರ ತರಬೇತಿ ಹಾಗೂ ಬೋಧನೆಗಳಿಂದ ಸತತವಾಗಿ ಸಿಇಟಿ, ನೀಟ್, ಜೆಇಇ, ಎನ್.ಡಿ.ಎ., ಬೋರ್ಡ್, ಸಿಎ, ಸಿಎಸ್ ಪರೀಕ್ಷೆಗಳಲ್ಲಿ ರಾಷ್ಟ್ರ, ರಾಜ್ಯದಲ್ಲಿ ಅದೆಷ್ಟೋ ರ‍್ಯಾಂಕ್ ಗಳನ್ನು ಗಳಿಸಿರುತ್ತೇವೆ. ಆ ನುರಿತ ಉಪನ್ಯಾಸಕರ ತಂಡವೇ ಮುಂದೆಯೂ ಸಹ ಮುಂದಿನ ವರ್ಷದ ವಿದ್ಯಾರ್ಥಿಗಳಿಗೆ ಇದಕ್ಕಿಂತಲೂ ಹೆಚ್ಚಿನ ವಿಶೇಷ ರೀತಿಯ ತರಬೇತಿ ಹಾಗೂ ಬೋಧನೆ ನೀಡಲು ನಮ್ಮೊಂದಿಗೆ ಕೈಜೋಡಿಸುತ್ತಾರೆ. ಈ ಬಗ್ಗೆ ಯಾವುದೇ ಗೊಂದಲವು ಬೇಡವೆಂದು ಪಾಲಕ, ವಿದ್ಯಾರ್ಥಿ ಹಾಗೂ ಸಮಾಜದ ಜನರ ಪರವಾಗಿ ಸಂಸ್ಥೆಯು ಪ್ರಕಟನೆಯಲ್ಲಿ ಈಗಾಗಲೇ ತಿಳಿಸಿದೆ.

ಈ ನಮ್ಮ ಸಂಸ್ಥೆಯಲ್ಲಿ ಕಳೆದ ವರ್ಷ ಉತ್ತಮವಾದ ಅಂಕಗಳನ್ನು ಪಡೆದು ರ‍್ಯಾಂಕ್ ಗಳಿಸಿದ ಹಲವಾರು ವಿದ್ಯಾರ್ಥಿಗಳು ಬೇರೆ ಸಂಘ ಸಂಸ್ಥೆಗಳಲ್ಲಿ ಸ್ಥಾನಮಾನ, ಉದ್ಯೋಗ, ಸನ್ಮಾನವನ್ನು ಪಡೆದುಕೊಂಡಿರುವುದು ಬಹಳ ಹೆಮ್ಮೆಯ ವಿಚಾರವಾಗಿದೆ. ಆದರೆ ಇದು ಕೇವಲ ಪ್ರತಿಭಾವಂತ ಮಕ್ಕಳನ್ನು ಗುರುತಿಸುವುದು ಮಾತ್ರವಲ್ಲದೆ ಅವರ ಸಂಸ್ಥೆಯ ಪ್ರಚಾರಕ್ಕೆ ಬಳಸಿಕೊಂಡಿರುವುದು ಖಂಡನೀಯ. ಇಂತಹ ಘಟನೆಗಳು ಈ ಸಂಸ್ಥೆಯ ಗಮನಕ್ಕೆ ಬಂದಿರುವುದರಿಂದ ಇದು ನಾಡಿನ ಜನತೆಯ ದಿಕ್ಕು ತಪ್ಪಿಸುವ ಒಂದು ತಂತ್ರದ ಹುನ್ನಾರವಾಗಿದ್ದು ಇದರ ಬಗ್ಗೆ ಯಾರಿಗಾದರೂ ಗೊಂದಲವಿದ್ದರೆ ಆ ಅದ್ಭುತ ವಿದ್ಯಾರ್ಥಿಗಳ ಸಾಧನೆಗೆ ಅಡಿಪಾಯ ಹಾಕಿರುವ ನಮ್ಮ ಸಂಸ್ಥೆಯ ಬಗ್ಗೆ ಅಭಿಮಾನದಿಂದ ನೀವು ಏನೇ ಗೊಂದಲವಿದ್ದರು ಸಹ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿಯವರನ್ನು ಸಂಪರ್ಕಿಸಿ(9731143328) ಗೊಂದಲಗಳನ್ನು ಪರಿಹರಿಸಿಕೊಳ್ಳುವಂತೆ ವಿನಂತಿಸಿಕೊಳ್ಳುತ್ತೇ ವೆ.

ಸಂಸ್ಥೆಯ ವಿಶೇಷತೆಗಳು : ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಪ್ರಗತಿಗೆ ಮೂಲಕಾರಣವೇ ಬೋಧನೆ, ತರಬೇತಿ ಹಾಗೂ ಓದುವ ಕಾರ್ಯತಂತ್ರವಾಗಿರುತ್ತದೆ. ವಸತಿ ನಿಲಯದ ಹಾಗೂ ಮನೆಯಿಂದ ಬರುವ ವಿದ್ಯಾರ್ಥಿಗಳಿಗೆ ಓದುವ ಕಾರ್ಯಯೋಜನೆಯನ್ನು ಕೇಂದ್ರವಾಗಿಟ್ಟುಕೊಂಡು ವಿಶೇಷ ತರಗತಿಯನ್ನು ಆಯೋಜಿಸಿ, ಅಲ್ಲಿಯೂ ವಿಶೇಷ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೂ ಸಹ ವಿಶೇಷ ತರಗತಿಯನ್ನು ಉಚಿತವಾಗಿ ಹಮ್ಮಿಕೊಂಡಿರುವುದು ಉತ್ತಮಫಲಿತಾಂಶಕ್ಕೆ ಕಾರಣವಾಗಿದೆ. ಕೇವಲ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ. ಮನೆಯಿಂದ ಬರುವ ವಿದ್ಯಾರ್ಥಿಗಳ ಪೋಷಕರ ಹಿತದೃಷ್ಟಿಯಿಂದ ಆ ವಿದ್ಯಾರ್ಥಿಗಳಿಗೂ ಉಚಿತ ತರಬೇತಿಯನ್ನು ನೀಡಿ ಅವರಿಗೂ ಉತ್ತಮ ಅಂಕ ತಂದುಕೊಟ್ಟಿರುವುದು ಸಂಸ್ಥೆಯ ಇನ್ನೊಂದು ಹೆಗ್ಗಳಿಕೆಯಾಗಿದೆ.

ಈ ರೀತಿಯಾಗಿ ಎಕ್ಸಲೆಂಟ್ ವಿದ್ಯಾಸಂಸ್ಥೆಯು ಗ್ರಾಮೀಣ ವಲಯದಲ್ಲಿ ಶೈಕ್ಷಣಿಕವಾಗಿ ದೊಡ್ಡ ಸಾಧನೆ ಮಾಡಿದೆ. ಇದಕ್ಕೆ ನಿದರ್ಶನವೆನ್ನುವಂತೆ ಈ ಸಲವು ರಾಷ್ಟ್ರಮಟ್ಟದ ‘ಜೆಇಇ ಅಡ್ವಾನ್ಸ್’ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ನಾನ ‘ಜೆಇಇ ಮೈನ್ಸ್’ ನಲ್ಲಿ ಶೇಕಡಾ 90ಕ್ಕಿಂತಲೂ ಅಧಿಕ ಅಂಕಗಳನ್ನು 14 ವಿದ್ಯಾರ್ಥಿಗಳು ಹಾಗೂ ಶೇಕಡಾ 95 ಅಂಕಗಳನ್ನು 05 ವಿದ್ಯಾರ್ಥಿಗಳು ಪಡೆದಿರುವುದು ರಾಷ್ಟ್ರಮಟ್ಟದಲ್ಲಿಯೇ ಈ ಶಿಕ್ಷಣ ಸಂಸ್ಥೆಯನ್ನು ಗುರುತಿಸುವಂತಾಗಿದೆ. ‘ನೀಟ್’ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನ ಪಡೆದುದಲ್ಲದೇ ಒಟ್ಟು 35 ವಿದ್ಯಾರ್ಥಿಗಳು ಮೆಡಿಕಲ್ ಸೀಟ್ ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ. ‘ಸಿಇಟಿ’ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 10000 ರ‍್ಯಾಂಕ್ ನ ಒಳಗೆ 94 ವಿದ್ಯಾರ್ಥಿಗಳು ಪಡೆದು ಅದ್ಭುತ ಸಾಧನೆ ಗಳಿಸಿರುವುದು ಎಕ್ಸಲೆಂಟ್ ಸಂಸ್ಥೆಯ ಹೆಮ್ಮೆಯ ವಿಚಾರವಾಗಿದೆ. ಅಷ್ಟೇ ಅಲ್ಲದೇ, ಕರ್ನಾಟಕ ಬೋರ್ಡ್ ಪರೀಕ್ಷೆಯಲ್ಲಿ 13 ರ್ಯಾಂಕ್ ಗಳನ್ನು ಪಡೆದಿರುವುದು ಮಾತ್ರವಲ್ಲದೇ ಕಾಲೇಜಿನ 404 ವಿದ್ಯಾರ್ಥಿಗಳಲ್ಲಿ 315 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಅಂಕಗಳಿಸಿ ಉತ್ತೀರ್ಣರಾಗಿದ್ದು, ಶೇಕಡಾ 90ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು 226, ಶೇಕಡಾ 95ಕ್ಕಿಂತಲೂ ಅಧಿಕ ಅಂಕಗಳಿಸಿರುವ ವಿದ್ಯಾರ್ಥಿಗಳು 99 ಪಡೆದಿರುವುದು ಸಂಸ್ಥೆಯ ಸಾಧನೆಗೆ ನಿದರ್ಶನವಾಗಿದೆ. ವಾಣಿಜ್ಯ ವಿಭಾಗದಲ್ಲಿಯೂ ಸಹ ಎಕ್ಸಲೆಂಟ್ ವಿದ್ಯಾಸಂಸ್ಥೆಯು ಸಿಎ ಹಾಗೂ ಸಿಎಸ್ ಸ್ಪರ್ಧಾತ್ಮಕ ತರಗತಿಯನ್ನು ನಡೆಸುತ್ತಿದ್ದು, ಅದರಲ್ಲಿಯೂ ‘ಸಿಎ’ ಫೌಂಡೇಶನ್‌ನಲ್ಲಿ 6 ವಿದ್ಯಾರ್ಥಿಗಳು ಹಾಗೂ ‘ಸಿಎಸ್’ ಪರೀಕ್ಷೆಯಲ್ಲಿ 02 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಗೊಂಡು ಇಡೀ ರಾಷ್ಟ್ರಮಟ್ಟದಲ್ಲೇ ಅಗ್ರಗಣ್ಯ ಸಂಸ್ಥೆಯಾಗಿ ಮೂಡಿಬಂದಿರುವುದು ಇಲ್ಲಿನ ಶೈಕ್ಷಣಿಕ ಕೀರ್ತಿಗೆ ಮೆರಗನ್ನು ನೀಡಿದೆ. ಕೇವಲ ಈ ಸಂಸ್ಥೆಯೂ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿರುವುದು ಮಾತ್ರವಲ್ಲದೇ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದುಕೊಳ್ಳಲು ನಾನಾ ರೀತಿಯ ಶೈಕ್ಷಣಿಕ ಕಾರ್ಯ ತಂತ್ರಗಳನ್ನು ರೂಪಿಸಿದೆ.

ಪ್ರಾಶುಪಾಲ ನಾಗರಾಜ್ ಶೆಟ್ಟಿ ಕೂಡಾ ಎಕ್ಸಲೆಂಟ್ ವಿದ್ಯಾ ಸಂಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ನಡೆಸುವ ಕಾರ್ಯ ಚಟುವಟಿಕೆಗಳನ್ನು ವಿವರಿಸಿ, ಇಂತಹ ಸಾಧಕ ಸಂಸ್ಥೆಯ ಬಗ್ಗೆ ಅಪಪ್ರಚಾರ ನಿರತರಾದ ಯಾರೇ ಆಗಲಿ, ಅಂತಹವರ ವಿರುದ್ಧ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮಗಳನ್ನು ಜರುಗಿಸುವುದಾಗಿ ತಿಳಿಸಿದರು. ಮಾತ್ರವಲ್ಲ, ವಿದ್ಯಾರ್ಥಿಗಳು, ಪೋಷಕರು ಹಾಗೂ ವಿದ್ಯಾಭಿಮಾನಿಗಳು ಅಪಪ್ರಚಾರಗಳಿಗೆ ಕಿವಿಗೊಡದೆ, ಯಾವುದೇ ಸ್ಪಷ್ಟನೆಗಳು, ವಿವರಣೆಗಳನ್ನು ಬೇಕಾದರೂ ಸಂಸ್ಥೆಯಿಂದ ಪಡೆದುಕೊಳ್ಳಬೇಕು ಎಂದೂ ಮನವಿ ಮಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ, ಪ್ರಾಂಶುಪಾಲ ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.