ಡೈಲಿ ವಾರ್ತೆ: 24/ಫೆ. /2025

ಭದ್ರಾವತಿ| ರೌಡಿಶೀಟರ್ ಕಾಲಿಗೆ ಪೊಲೀಸರಿಂದ ಗುಂಡೇಟು!

ಶಿವಮೊಗ್ಗ: ಭದ್ರಾವತಿಯಲ್ಲಿ ಮತ್ತೊಮ್ಮೆ ಗುಂಡಿನ ಸದ್ದು
ಮೊಳಗಿದೆ. ಫೆ. 21ರಂದು ಹೊಸಮನೆ ಪೊಲೀಸ್ ಠಾಣೆಯ ಎಸ್‌ಐ ಕೃಷ್ಣ, ಗುಂಡಾ ಅಲಿಯಾಸ್ ರವಿ ಎಂಬಾತನ ಮುಂಗಾಲಿಗೆ ಗುಂಡು ಹೊಡೆದಿದ್ದರು.

ಇದೀಗ ಪೇಪ‌ರ್ ಟೌನ್ ಪೊಲೀಸ್ ಇನ್‌ಸ್ಪೆಕ್ಟರ್ ನಾಗಮ್ಮ ಮತ್ತೊಬ್ಬ ರೌಡಿಶೀಟರ್‌ಗೆ ಪೊಲೀಸ್ ಬುಲೆಟ್‌ನ ರುಚಿ ತೋರಿಸಿದ್ದಾರೆ.

ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ವ್ಯಾಪ್ತಿಯ ಪೊಲೀಸರು, ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಹಾಗೂ ಕೊಲೆಯತ್ನ ಪ್ರಕರಣವೂ ಸೇರಿದಂತೆ 12 ಕೇಸ್‌ಗಳಲ್ಲಿ ಬೇಕಾಗಿರುವ ರೌಡಿಶೀಟರ್ ಶಾಹಿದ್ ನನ್ನು ಸೆರೆ ಹಿಡಿಯಲು ಸೋಮವಾರ (ಫೆ.24) ತೆರಳಿದ್ದರು. ಈ ವೇಳೆ ಆತ ನಾಗರಾಜ್ ಎಂಬ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದ. ಆ ವೇಳೆ ಪಿಐ ನಾಗಮ್ಮ ಶಾಹಿದ್ ಕಾಲಿಗೆ ಗುಂಡು ಹಾರಿಸಿ ಆತನನ್ನ ನೆಲಕ್ಕೆ ಬೀಳಿಸಿದ್ದಾರೆ.

ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಪೇಪರ್ ಟೌನ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣವೂ ಸಹ ದಾಖಲಾಗಿದೆ.
ಈ ಬಗ್ಗೆ ಸ್ವತಃ ಎಸ್‌ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದಾರೆ.