ಡೈಲಿ ವಾರ್ತೆ: ಫೆ./03/2026

ಧರ್ಮ ದ್ವೇಷ ಪ್ರಚೋದನೆ ಆರೋಪ: ಬ್ರಹ್ಮಾವರ ಪ್ರಕರಣದಲ್ಲಿ ಆರೋಪಿಗಳಿಗೆ ನ್ಯಾಯಾಲಯದಿಂದ ಜಾಮೀನು

ಬ್ರಹ್ಮಾವರ: ಧರ್ಮಗಳ ನಡುವೆ ದ್ವೇಷ ಭಾವನೆ ಉಂಟು ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಸಂತೋಷ್ ಹಾಗೂ ಕೋಟೇಶ್ವರ ಕೆ. ನಾಗರಾಜ ಎಂಬವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ,
ಬ್ರಹ್ಮಾವರದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಡುಪಿ ಪ್ರಥಮ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.

“ಶಿರಡಿ ಸಾಯಿ ಬಾಬಾ ಜೇಬಿಗೆ ಹಾಕಿದ ಹಿಂದೂಗಳ ಹಣ ಎಲ್ಲಿಗೆ ಹೋಗುತ್ತದೆ, ನೀವೇ ನೋಡಿ. ದೇಶದ ಎಲ್ಲಾ ಹಿಂದೂಗಳಿಗೆ ಅದು ತಲುಪಬೇಕು” ಎಂಬ ಅರ್ಥದ ವಿಡಿಯೋವನ್ನು ವಾಟ್ಸಪ್ ಗ್ರೂಪ್‌ನಲ್ಲಿ ಹಂಚಿಕೊಂಡು, ಸಾರ್ವಜನಿಕರಲ್ಲಿ ತಪ್ಪು ಸಂದೇಶ ಹಾಗೂ ಧರ್ಮ ದ್ವೇಷ ಭಾವನೆ ಮೂಡಿಸಿದ್ದಾರೆ ಎಂಬ ಆರೋಪದ ಮೇಲೆ, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ BNS ಕಾಯ್ದೆಯ ಸೆಕ್ಷನ್‌ಗಳು 196(1), 353(2) ಮತ್ತು 299 ಅಡಿಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.

ಒಂದನೇ ಆರೋಪಿಯ ಪರವಾಗಿ ಕುಂದಾಪುರದ ನ್ಯಾಯವಾದಿ ಬನ್ನಾಡಿ ಸೋಮನಾಥ ಹೆಗ್ಡೆ, ಎರಡನೇ ಆರೋಪಿಯ ಪರವಾಗಿ ಕುಂದಾಪುರದ ನ್ಯಾಯವಾದಿ ಕಾಳಾವರ ಉದಯ್ ಶೆಟ್ಟಿ ವಾದ ಮಂಡಿಸಿದ್ದರು.