ಡೈಲಿ ವಾರ್ತೆ: 08/ಮಾರ್ಚ್ /2025

ಮೂಡೂರು-ಪಡೂರು “ಬಂಟ್ವಾಳ ಕಂಬಳೋತ್ಸವ” ಉದ್ಘಾಟನೆ

ಬಂಟ್ವಾಳ : ನಾವೂರು ಗ್ರಾಮದ ಕೂಡಿಬೈಲಿನಲ್ಲಿ 14ನೇ ವರ್ಷದ ಮೂಡೂರು-ಪಡೂರು “ಬಂಟ್ವಾಳ ಕಂಬಳೋತ್ಸವ” ಶನಿವಾರ ಉದ್ಘಾಟನೆಗೊಂಡಿತು.

ಅಲ್ಲಿಪಾದೆ ಸಂತ ಅಂತೋನಿ ಚರ್ಚ್ ನ ಧರ್ಮಗುರು ರೆ.ಫಾ. ರಾಬರ್ಟ್ ಡಿಸೋಜ ಹಾಗೂ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಅವರುಗಳು ಜಂಟಿಯಾಗಿ ಕಂಬಳೋತ್ಸವ ಉದ್ಘಾಟಿಸಿದರು.

ಸಮಿತಿಯ ಗೌರವಾಧ್ಯಕ್ಷ, ಮಾಜಿ ಸಚಿವ ಬಿ. ರಮಾನಾಥ ರೈ ಅವರು ಜೋಡುಕರೆಯಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಪುರೋಹಿತ ಹರಿಪ್ರಸಾದ್ ಬೊಳ್ಳುಲಾಯ ಅವರು ಪೂಜಾ ಕಾರ್ಯ ನೆರವೇರಿಸಿದರು.

ಕಂಬಳೋತ್ಸವದಲ್ಲಿ ಘನ ಉಪಸ್ಥಿತರಿದ್ದ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಮಾತನಾಡಿ, ಕಂಬಳ ಎಂಬುದು ತುಳುನಾಡಿನ ಮಣ್ಣಿನ ಕ್ರೀಡೆ. ಇದರಲ್ಲಿ ದೊಡ್ಡ ಮಟ್ಟದ ಸೌಹಾರ್ದತೆ ಇದೆ. ಇದನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಸುಪ್ರೀಂ ಕೋರ್ಟ್ ಕಂಬಳ ಕ್ರೀಡೆಯನ್ನು ನಿಷೇಧಿಸಿದ ಸಂದರ್ಭ ಅದನ್ನು ಪುನರಾರಂಭಿಸಲು ಅಂದಿನ ಉಸ್ತುವಾರಿ ಮಂತ್ರಿ, ಕಂಬಳ ಪ್ರೇಮಿಯಾದ ರಮಾನಾಥ ರೈ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಗಳು ಪ್ರಮುಖ ಕಾರಣರಾಗಿದ್ದಾರೆ ಎಂದ ಖಾದರ್ ಸಮಾಜವನ್ನು ವಿಭಜಿಸಲು ಬಹಳ ಸುಲಭ ಇದೆ. ಆದರೆ ಸೌಹಾರ್ದಯುತವಾಗಿ ಪೋಣಿಸಲು ಕಷ್ಟ ಇದೆ. ಈ ಸೌಹಾರ್ದ ಪರಂಪರೆ ಕಂಬಳ ಕ್ರೀಡೋತ್ಸವದಲ್ಲಿ ಕಂಡು ಬರುತ್ತಿದೆ ಎಂದರು.

ಈ ಸಂದರ್ಭ ಮಾತನಾಡಿದ ರಮಾನಾಥ ರೈ ಅವರು, ಎಲ್ಲ ಕಂಬಳಕೂಟಗಳಿಗಿಂತ ಬಂಟ್ವಾಳ ಕಂಬಳೋತ್ಸವ ಹಲವು ವೈಶಿಷ್ಟ್ಯಗಳಿಂದ ನಡೆದುಕೊಂಡು ಬಂದಿದೆ. ವರ್ಷದಿಂದ ವರ್ಷಕ್ಕೆ ಕೆಲವು ಪ್ರಥಮ ಪ್ರಯೋಗಗಳನ್ನು ಬಂಟ್ವಾಳ ಕಂಬಳದಲ್ಲಿ ಮಾಡಲಾಗಿದೆ. ಈ ಬಾರಿ ಕಂಬಳ ಮೈದಾನಕ್ಕೆ ಶಾಶ್ವತ ಹೈಮಾಸ್ಟ್ ದೀಪದ ಕಂಬಗಳನ್ನು ಅಳವಡಿಸಲಾಗಿದೆ. ಪ್ರತೀ ಬಾರಿಯೂ ಸಿನಿಮಾ ನಟರನ್ನು ಆಹ್ವಾನಿಸಿ ಗೌರವಿಸಲಾಗುತ್ತಿದೆ ಎಂದರು.

ಕರ್ನಾಟಕ ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ, ಫರ್ಲಾ ಚರ್ಚ್ ಧರ್ಮಗುರು ಫಾ| ಮಾರ್ಕ್ ಅರುಣ್ ಡಿಸೋಜ, ಮಾಜಿ ಶಾಸಕ ಜೆ ಆರ್ ಲೋಬೋ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ, ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೋ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಮನಪಾ ಮಾಜಿ ಮೇಯರ್ ಗಳಾದ ಶಶಿಧರ್ ಹೆಗ್ಡೆ,
ಕೆ. ಅಶ್ರಫ್, ನಮ್ಮ ಕುಡ್ಲ ವ್ಯವಸ್ಥಾಪಕ ನಿರ್ದೇಶಕ ಲೀಲಾಕ್ಷ ಕರ್ಕೇರ, ಹೆದ್ದಾರಿ ಇಲಾಖೆಯ ಎಂಜಿನಿಯರ್ ಶಿವಪ್ರಸಾದ್ ಅಜಿಲ, ಕೆಪಿಸಿಸಿ ಸದಸ್ಯ ಪೃಥ್ವಿರಾಜ್ ಆರ್ ಕೆ, ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ ಅಧ್ಯಕ್ಷ ಆಲ್ವಿನ್ ಡಿಸೋಜ, ಜಿ.ಪಂ. ಮಾಜಿ ಸದಸ್ಯ ಧರಣೇಂದ್ರಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ಅಧ್ಯಕ್ಷೆ ಜಯಂತಿ ವಿ ಪೂಜಾರಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ., ಕಂಬಳ ಸಮಿತಿ ಸಂಚಾಲಕ ಬಿ ಪದ್ಮಶೇಖರ್ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತೂರು, ಕೋಶಾಧಿಕಾರಿ ಪಿಲಿಫ್ ಫ್ರಾಂಕ್, ಉಪಾಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್, ಬಿ.ಎಂ.ಅಬ್ಬಾಸ್ ಅಲಿ, ಸುದರ್ಶನ್ ಜೈನ್, ಅವಿಲ್ ಮಿನೇಜಸ್, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಶೇಖರ ಭಂಡಾರಿ,
ಬಿ.ಆರ್.ಅಂಚನ್, ಶಬೀರ್ ಎಸ್, ಭುವನೇಶ್ ಪಚ್ಚಿನಡ್ಕ, ಮೊದಲಾದವರು ಭಾಗವಹಿಸಿದ್ದರು.

  ಕಂಬಳ ಸಮಿತಿಯ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್ ಸ್ವಾಗತಿಸಿ, ಪ್ರಸ್ತಾವನೆಗೈದರು.   ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.