ಈಗ ಇರೋದು ಸಿದ್ದರಾಮಯ್ಯ ಸರ್ಕಾರ, ನಿಮ್ಮಪ್ಪಂದಲ್ಲ: MLA ಪ್ರದೀಪ್​ ಈಶ್ವರ್

ಬೆಂಗಳೂರು: ಕೈವಾರ ತಾತಯ್ಯ ಯೋಗಿನಾರೇಯಣ ಯತೀಂದ್ರರ 299ನೇ ಜಯಂತ್ಯುತ್ಸವ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿದ್ದು ಈ ವೇಳೆ ಶಾಸಕ ಪ್ರದೀಪ್‌ ಈಶ್ವರ್‌ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಪ್ರದೀಪ್ ಈಶ್ವರ್ ಮಾತನಾಡುವ ವೇಳೆ ಬಿಜೆಪಿ ಕಾರ್ಯಕರ್ತರು ಗುಲ್ಲೆಬ್ಬಿಸಿದರು. ಈ ವೇಳೆ ಆಕ್ರೋಶಭರಿತರಾದ ಪ್ರದೀಪ್‌ ಈಶ್ವರ್ ಬಿಜೆಪಿ ಕಾರ್ಯಕ್ರರ್ತರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವೇದಿಕೆ ಮೇಲೆ ಪ್ರದೀಪ್‌ ಈಶ್ವರ್‌ ಮಕ್ಕಳ ಶಿಕ್ಷಣ ಕುರಿತಂತೆ ಮಾತನಾಡುತ್ತಿದ್ದರು. ಇದಕ್ಕೆ ಕೆಲ ಬಿಜೆಪಿ ಕಾರ್ಯಕರ್ತರು ಆಕ್ಷೇಪ ಎತ್ತಿದರು. ಇದರಿಂದ ಆಕ್ರೋಶಗೊಂಡ ಪ್ರದೀಪ್ ಈಶ್ವರ್, ಸಮುದಾಯ ಗುಣಗಾನ ಮಾಡೋಕೆ ಇದೇನು ಬಿಜೆಪಿ ಕಾರ್ಯಕ್ರಮ ಅಂದುಕೊಂಡಿದ್ದೀರಾ? ಈ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇದೋದು. ಬಿಜೆಪಿ ಗುಣಗಾನ ಮಾಡೋದು ನಿಲ್ಲಬೇಕು. ಬಾಯಿ ಮುಚ್ಕೊಂಡು ಕೂತ್ಕೊಬೇಕು. ರಾಜ್ಯದಲ್ಲಿ ಸಿದ್ದರಾಮಯ್ಯನ ಸರ್ಕಾರ ಇರೋದು, ನಿಮ್ಮಪ್ಪನ ಸರ್ಕಾರ ಅಲ್ಲ ಎಂದು ಬಿಜೆಪಿ ಕಾರ್ಯಕರ್ತರಿಗೆ ಶಾಸಕರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದು ಸಿದ್ದರಾಮಯ್ಯನ ಕಾರ್ಯಕ್ರಮ, ನಿಮ್ಮಪ್ಪನ ಕಾರ್ಯಕ್ರಮ ಅಲ್ಲ ಗೆಟ್‌ ಲಾಸ್ಟ್‌ ಅಂತ ಕಿಡಿಕಾರಿದರು. ನಮಗೂ ನಮ್ಮ ಪಾರ್ಟಿ ಸಿದ್ಧಾಂತಗಳಿರುತ್ತೆ. ನೀವು ನಿಮ್ಮ ಪಕ್ಷವನ್ನ ಗುಣಗಾನ ಮಾಡಿದ್ರೆ, ನಾವು ನಮ್ಮ ಪಕ್ಷವನ್ನ ಗುಣಗಾನ ಮಾಡಬೇಕಾಗುತ್ತೆ ಅಂತ ವಾರ್ನಿಂಗ್‌ ಕೊಟ್ಟರು. ಈ ವೇಳೆ ವೇದಿಕೆ ಮೇಲಿದ್ದ ಬಿಜೆಪಿ ಸಂಸದ ಪಿ.ಸಿ ಮೋಹನ್‌.. ಪ್ರದೀಪ್‌ ಈಶ್ವರ್‌ ನಿಮಗೆ ಉತ್ಸಾಹ ಇದೆ. ಆದರೆ ನೀವು ಇಲ್ಲಿ ಕೂತ್ಕೊಂಡು ಇದು ಸಿದ್ದರಾಮಯ್ಯನ ಪ್ರೋಗ್ರಾಂ ಅಂದ್ರೆ, ನಾನು ಬಿಜೆಪಿ ಸಂಸದ ಇಲ್ಲಿ ಇರಬೇಕೋ ಹೋಗಬೇಕೋ‌ ಹೇಳಿ? ಅಂತ ಹೇಳಿದರು. ಆದರೆ ಪಿ.ಸಿ ಮೋಹನ್ ಕೂಡ ಕಾರ್ಯಕರ್ತರನ್ನು ಕುಳಿತುಕೊಳ್ಳುವಂತೆ ಹೇಳುವ ದೃಶ್ಯ ಕಂಡು ಬಂತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಗಣ್ಯರು ಹಾಗೂ ಕಾರ್ಯಕ್ರಮ ಆಯೋಜಕರು ಇಬ್ಬರನ್ನು ಮನವೊಲಿಸುವ ಪ್ರಯತ್ನ ಮಾಡಿದರು.