ಡೈಲಿ ವಾರ್ತೆ: 06/ಏಪ್ರಿಲ್ /2025

ಬಾಲಕನ ಮೇಲೆ ಹಲ್ಲೆ ನಡೆಸಿ, ಗುಪ್ತಾಂಗಕ್ಕೆ ಇರುವೆ ಬಿಟ್ಟು ಚಿತ್ರಹಿಂಸೆ: ಆರೋಪಿಗಳ ಬಂಧನ

ದಾವಣಗೆರೆ: ಬಾಲಕನನ್ನು ಬೆತ್ತಲೆ ಮಾಡಿ ಥಳಿಸಿ, ಚಡ್ಡಿಯೊಳಗೆ ಕೆಂಪು ಇರುವ ಬಿಟ್ಟು ವಿಕೃತಿ ಮೆರೆದಿದ್ದ 10 ಜನ ಆರೋಪಿಗಳಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಏ.4 ರಂದು ಚನ್ನಗಿರಿಯ ಅಸ್ತಾಪನಹಳ್ಳಿ ಗ್ರಾಮದಲ್ಲಿ ಬಾಲಕನ ಮೇಲೆ ಹಲ್ಲೆ ನಡೆಸಲಾಗಿತ್ತು. ಕಳ್ಳತನ ಮಾಡಿದ್ದಾನೆ ಹಾಗೂ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ ಎಂದು ಆರೋಪಿಸಿ ಬಾಲಕನ ಸೋದರಮಾವ ಸೇರಿದಂತೆ ಅತನ ಸಂಬಂಧಿಕರೇ ಈ ರೀತಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಬಾಲಕನನ್ನು ಅಮಾನವೀಯವಾಗಿ ಥಳಿಸಿ, ಅಡಿಕೆ ಗಿಡಕ್ಕೆ ಕಟ್ಟಿಹಾಕಿ ಚಿತ್ರಹಿಂಸೆ ನೀಡಿದ್ದರು. ಚಡ್ಡಿಯೊಳಗೆ ಹಾಗೂ ಮೈ ಮೇಲೆ ಕೆಂಪು ಇರುವೆ ಬಿಟ್ಡು ವಿಕೃತಿ ಮೆರೆದಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ವಿಡಿಯೋ ವೈರಲ್ ಅದ ಬೆನ್ನಲ್ಲೇ ಚನ್ನಗಿರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಾಲಕನ ತಾತಾ ಕೂಡ ಹಲ್ಲೆ ನಡೆಸಿದವರ ವಿರುದ್ಧ ದೂರು ನೀಡಿದ್ದರು. ದೂರಿನ ಅನ್ವಯ ಗ್ರಾಮದ ಸುಭಾಷ್ (23), ಲಕ್ಕಿ(21) ದರ್ಶನ್ (22), ಪರಶು (25) ಶಿವದರ್ಶನ್ (23) ಹರೀಶ್ (25), ಪಟ್ಟಿ ರಾಜು(20), ಭೂಣಿ (18) ಸುಧನ್ ಅಲಿಯಾಸ್ ಮಧುಸೂಧನ್ (30) ವಿರುದ್ಧ ಕೇಸ್ ದಾಖಲಾಗಿದೆ. ಹತ್ತು ಜನರಲ್ಲಿ ಈಗಾಗಲೇ 3 ಜನರನ್ನು ಬಂಧಿಸಲಾಗಿದ್ದು, ಉಳಿದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.