



ಡೈಲಿ ವಾರ್ತೆ: 11/MAY/2025


ಪಾಕ್ ದಾಳಿ: ಗಡಿಯಲ್ಲಿ ಬಿಎಸ್ಎಫ್ ಸಬ್ ಇನ್ಸ್ಪೆಕ್ಟರ್, ಉಧಮ್ಪುರ ವಾಯುನೆಲೆಯಲ್ಲಿ ಸೈನಿಕ ಹುತಾತ್ಮ

ಜಮ್ಮು: ಜಮ್ಮುವಿನ ಆರ್ಎಸ್ ಪುರ ಸೆಕ್ಟರ್ನಲ್ಲಿ ಶನಿವಾರ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಬ್ ಇನ್ಸ್ಪೆಕ್ಟರ್ ಹುತಾತ್ಮರಾಗಿದ್ದಾರೆ. ಜೊತೆಗೆ ಏಳು ಜನರು ಗಾಯಗೊಂಡಿದ್ದಾರೆ.
ಬಿಎಸ್ಎಫ್ ಸಬ್ ಇನ್ಸ್ಪೆಕ್ಟರ್ ಎಂಡಿ ಇಮ್ತಿಯಾಜ್ ಗಡಿಯಲ್ಲಿ ಪಡೆಯನ್ನು ಧೈರ್ಯದಿಂದ ಮುನ್ನಡೆಸುತ್ತಾ ಅತ್ಯುನ್ನತ ತ್ಯಾಗ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಬಿಎಸ್ಎಫ್ ಗಡಿ ಹೊರಠಾಣೆಯನ್ನು ಸಬ್ ಇನ್ಸ್ಪೆಕ್ಟರ್ ಎಂಡಿ ಇಮ್ತಿಯಾಜ್ ಧೈರ್ಯದಿಂದ ಮುನ್ನಡೆಸುತ್ತಿದ್ದರು. ಮೇ 10, 2025 ರಂದು ಜಮ್ಮುವಿನ ಆರ್ಎಸ್ ಪುರ ಪ್ರದೇಶದ ಅಂತರರಾಷ್ಟ್ರೀಯ ಗಡಿಯಲ್ಲಿ ಗುಂಡಿನ ದಾಳಿಯ ಸಮಯದಲ್ಲಿ ಬಿಎಸ್ಎಫ್ ವೀರಯೋಧ ಹುತಾತ್ಮರಾಗಿದ್ದು, ಅವರ ಅತ್ಯುನ್ನತ ತ್ಯಾಗಕ್ಕೆ ನಮ್ಮ ಸಲಾಂ” ಎಂದು ಬಿಎಸ್ಎಫ್ ತಿಳಿಸಿದೆ.
ಬಿಎಸ್ಎಫ್ನ ಮಹಾನಿರ್ದೇಶಕರು ಮತ್ತು ಸೇರಿದಂತೆ ಭದ್ರತಾ ಪಡೆಯು ವೀರ ಯೋಧನ ಕುಟುಂಬಕ್ಕೆ ಸಂತಾಪ ಸೂಚಿಸಿದೆ. ಈ ಕಷ್ಟದ ಸಮಯದಲ್ಲಿ ಮೃತರ ಕುಟುಂಬದೊಂದಿಗೆ ನಾವು ದೃಢವಾಗಿ ನಿಲ್ಲುವುದಾಗಿ ಬಿಎಸ್ಎಫ್ ಹೇಳಿದೆ.
ಹುತಾತ್ಮ ಅಧಿಕಾರಿಗೆ ಗೌರವ ಸಲ್ಲಿಸಲು ಭಾನುವಾರ ಜಮ್ಮುವಿನ ಪಲೌರಾದಲ್ಲಿರುವ ಬಿಎಸ್ಎಫ್ ಪ್ರಧಾನ ಕಚೇರಿಯಲ್ಲಿ ಪೂರ್ಣ ಗೌರವಗಳೊಂದಿಗೆ ಮಾಲಾರ್ಪಣೆ ಸಮಾರಂಭ ನಡೆಯಲಿದೆ.
ಏತನ್ಮಧ್ಯೆ, ರಾಜಸ್ಥಾನದ ಜುನ್ಜುನುವಿನ ಸೈನಿಕರೊಬ್ಬರು ಪಾಕಿಸ್ತಾನಿ ಡ್ರೋನ್ನ ಅವಶೇಷ ತಗುಲಿ ಹುತಾತ್ಮರಾಗಿದ್ದಾರೆ. ಕದನ ವಿರಾಮ ಘೋಷಣೆ ಮುನ್ನ ಶನಿವಾರ ಜಮ್ಮು ಮತ್ತು ಕಾಶ್ಮೀರದ ಉದಮ್ಪುರ ಜಿಲ್ಲೆಯ ವಾಯುನೆಲೆಯಲ್ಲಿ ಸೇನಾ ವಾಯು ರಕ್ಷಣಾ ಪಡೆಯು ಪಾಕ್ ಡ್ರೋನ್ ಹೊಡೆದುರುಳಿಸಿತು. ಈ ವೇಳೆ ಉಧಮ್ಪುರ ವಾಯುನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೈನಿಕರೊಬ್ಬರಿಗೆ ಡ್ರೋನ್ ಅವಶೇಷಗಳು ತಗುಲಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಸಂತಾಪ ಸೂಚಿಸಿ, “ಭಾರತೀಯ ಸೇನೆಯ ಸೈನಿಕ ಮತ್ತು ರಾಜಸ್ಥಾನದ ಪುತ್ರ ಸುರೇಂದ್ರ ಸಿಂಗ್ ಮೋಗಾ ಅವರು ಉಧಮ್ಪುರ ವಾಯುನೆಲೆಯಲ್ಲಿ ರಾಷ್ಟ್ರೀಯ ಭದ್ರತೆಯ ಕರ್ತವ್ಯ ನಿರ್ವಹಿಸುವಾಗ ಹುತಾತ್ಮರಾದ ಸುದ್ದಿ ಅತ್ಯಂತ ನೋವಿನಿಂದ ಕೂಡಿದೆ. ಭಗವಾನ್ ಶ್ರೀರಾಮ ಅವರ ಆತ್ಮಕ್ಕೆ ತಮ್ಮ ದಿವ್ಯ ಪಾದಗಳಲ್ಲಿ ಸ್ಥಾನ ನೀಡಲಿ ಮತ್ತು ದುಃಖಿತ ಕುಟುಂಬಕ್ಕೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ” ಎಂದು ಪ್ರಾರ್ಥಿಸಿದ್ದಾರೆ.
ಕದನ ವಿರಾಮ ಘೋಷಣೆ ಬಳಿಕ ಪಾಕ್ ದಾಳಿ: ಭಾರತ ಮತ್ತು ಪಾಕ್ ಕದನ ವಿರಾಮ ಒಪ್ಪಂದಕ್ಕೆ ಶನಿವಾರ ಸಂಜೆ ಸಮ್ಮತಿ ನೀಡಿವೆ. ಆದರೂ ಕೂಡ ಈ ಒಪ್ಪಂದದ ಬಳಿಕ ಬಳಿಕ ಕೆಲವೇ ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಸರಣಿ ಡ್ರೋನ್ ದಾಳಿ ಮಾಡಿದೆ. ಇವುಗಳನ್ನು ಭಾರತೀಯ ವಾಯು ಪಡೆ ಹೊಡೆದುರುಳಿಸಿದೆ. ಇದರಿಂದ ಸ್ಫೋಟ ಸದ್ದು ಮತ್ತೆ ಕೇಳಿದ್ದರಿಂದ ಜನರು ಆತಂಕಕ್ಕೀಡಾಗಿದ್ದರು.